ಲಖನೌ: ವಾರಾಣಸಿಯಲ್ಲಿ ನೇಪಾಳ ಮೂಲದ ವ್ಯಕ್ತಿಯೊಬ್ಬನ ತಲೆಬೋಳಿಸಿರುವ ಹಿಂದುಪರ ಸಂಘಟನೆಯ ಸದಸ್ಯರು, ಜೈ ಶ್ರೀರಾಂ ಮತ್ತು ನೇಪಾಳ ಪ್ರಧಾನಿ ಮುರ್ದಾಬಾದ್ ಎಂಬ ಘೋಷಣೆಗಳನ್ನು ಕೂಗಿಸಿದ್ದಾರೆ.
ಈ ವಿಡಿಯೋ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೇಪಾಳ ಮೂಲದ ವ್ಯಕ್ತಿಯೊಬ್ಬನ ತಲೆಬೋಳಿಸಿ, ನದಿಯೊಂದರ ತಟದಲ್ಲಿ ಪದ್ಮಾಸನದಲ್ಲಿ ಕೂರಿಸಲಾಗಿದೆ. ಆತನ ಬೋಡು ತಲೆಯ ಮೇಲೆ ಕೂಡ ಜೈ ಶ್ರೀರಾಂ ಎಂಬ ಘೋಷಣೆ ಬರೆಯಲಾಗಿದೆ. ಆತನಿಂದ ವಿಶ್ವ ಹಿಂದು ಸೇನಾ ಜಿಂದಾಬಾದ್, ಹಿಂದೂಸ್ತಾನ್ ಜಿಂದಾಬಾದ್, ನೇಪಾಳ ಪ್ರಧಾನಿ ಮುರ್ದಾಬಾದ್ ಮತ್ತು ಜೈ ಶ್ರೀರಾಂ ಎಂಬ ಘೋಷಣೆ ಕೂಗಿಸುತ್ತಿರುವ ದೃಶ್ಯ ಆ ವಿಡಿಯೋ ತುಣುಕಿನಲ್ಲಿದೆ.
ಈ ವಿಡಿಯೋ ವೈರಲ್ ಆದ ನಂತರದಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವಾರಾಣಸಿ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಎಸ್ಎಸ್ಪಿ ಅಮಿತ್ ಪಾಠಕ್, ಈ ವಿಡಿಯೋ ತುಣಕನ್ನು ಚಿತ್ರೀಕರಿಸಿಕೊಂಡಿದ್ದ ಸಂತೋಷ್ ಪಾಂಡೆ ಎಂಬಾತನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ನಿಂದಾಗಿ ದೇಶದ 5 ಮಹಾನಗರಗಳಲ್ಲಿ ಆಗಿರುವ ಹಣದ ಉಳಿತಾಯ ಎಷ್ಟು ಗೊತ್ತಾ?
ವಿಶ್ವ ಹಿಂದು ಸೇನಾದ ಸಂಸ್ಥಾಪಕ ಅರುಣ್ ಪಾಠಕ್ ಪ್ರಮುಖ ಆರೋಪಿಯಾಗಿದ್ದಾನೆ. ಈತನೂ ಸೇರಿ ಈ ಕೃತ್ಯ ಎಸಗಿರುವ ಈತನ ಸಂಘಟನೆಯ ಇತರೆ ಸದಸ್ಯರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ವತಃ ಪಾಠಕ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ತಮ್ಮ ಹುದ್ದೆಯನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಕಳೆದ ವಾರ ಶ್ರೀ ರಾಮ ಭಾರತದ ಅಯೋಧ್ಯೆಯಲ್ಲಿ ಜನಿಸಿದವನಲ್ಲ. ನೇಪಾಳದಲ್ಲಿರುವ ಆಯೋಧ್ಯೆಯಲ್ಲಿ ಜನಿಸಿದವನು. ನಕಲಿ ಅಯೋಧ್ಯೆ ಸೃಷ್ಟಿಸಿ ನೇಪಾಳದ ಮೇಲೆ ಭಾರತ ಸಾಂಸ್ಕೃತಿಕ ಅತಿಕ್ರಮಣ ಮಾಡಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಅರುಣ್ ಪಾಠಕ್ ಮತ್ತು ಸಂಗಡಿಗರು ನೇಪಾಳ ಮೂಲದ ವ್ಯಕ್ತಿಗೆ ತಲೆಬೋಳಿಸಿ ಕಿರುಕುಳ ನೀಡಿದ್ದಾರೆ ಎಂದು ವಿವರಿಸಿದ್ದಾರೆ.