ನವದೆಹಲಿ: ಕಾಠ್ಮಂಡುವಿನಲ್ಲಿ ಬುಧವಾರ ನಿಗದಿಯಾಗಿದ್ದ ನೇಪಾಳ ಕಮ್ಯುನಿಸ್ಟ್ ಪಕ್ಷದ ಸ್ಥಾಯಿ ಸಮಿತಿ ಸಭೆ ಕೊನೇ ಕ್ಷಣದಲ್ಲಿ ಮುಂದೂಡಿಕೆಯಾಗಿದೆ. ಇದರಿಂದಾಗಿ ಪ್ರಧಾನಿ ಕೆ.ಪಿ. ಶರ್ಮ ಓಲಿ ಹಾಗೂ ಬಂಡಾಯ ಎದ್ದಿರುವ ಪುಷ್ಪ ಕಮಲ್ ದಹಾಲ್ ಪ್ರಚಂಡಾ ಅವರ ಬಣದ ನಡುವೆ ಸಂಧಾನ ಏರ್ಪಡುವ ಸಾಧ್ಯತೆಯೂ ಕಡಿಮೆಯಾಗಿದೆ. ಈ ವಿದ್ಯಮಾನದಿಂದಾಗಿ ನೇಪಾಳ ಕಮ್ಯುನಿಸ್ಟ್ ಪಾರ್ಟಿ ವಿಭಜನೆಗೊಳ್ಳುವುದು ನಿಶ್ಚಿತವಾಗಿದೆ. ಆದರೆ ಪ್ರಧಾನಿ ಪಟ್ಟ ಉಳಿಸಿಕೊಳ್ಳಲು ಕೆ.ಪಿ. ಶರ್ಮ ಓಲಿಗೆ ತುಂಬಾ ಕಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.
ನೇಪಾಳ ಕಮ್ಯುನಿಸ್ಟ್ ಪಾರ್ಟಿಯ ಸಹಅಧ್ಯಕ್ಷರಾಗಿರುವ ಓಲಿ ಮತ್ತು ಪ್ರಚಂಡಾ ಮಂಗಳವಾರ ಮಧ್ಯಾಹ್ನ ಭೇಟಿಯಾಗಿ ಮಾತುಕತೆ ನಡೆಸಿದರು ಎನ್ನಲಾಗಿದೆ. ಆದರೂ ಪಕ್ಷದ ಅಧ್ಯಕ್ಷ ಸ್ಥಾನವನ್ನಾಗಲಿ ಅಥವಾ ಪ್ರಧಾನಿ ಹುದ್ದೆಯನ್ನಾಗಲಿ ಬಿಟ್ಟುಕೊಡಲು ಓಲಿ ನಿರಾಕರಿಸಿದರು ಎನ್ನಲಾಗಿದೆ. ಆದರೂ ಬುಧವಾರ ನಿಗದಿಯಾಗಿದ್ದ ಪಕ್ಷದ ಸ್ಥಾಯಿ ಸಮಿತಿ ಸಭೆಯ ನಡೆಸಲು ಇಬ್ಬರೂ ಸಮ್ಮತಿಸಿದ್ದರು ಎಂದು ಹೇಳಲಾಗಿದೆ. ಇದರರ್ಥದಲ್ಲಿ ಓಲಿ ಅವರು 44 ಸದಸ್ಯ ಬಲದ ಸ್ಥಾಯಿ ಸಮಿತಿಯ ಸವಾಲನ್ನು ಎದುರಿಸಲು ಸಜ್ಜಾಗಿದ್ದರು ಎಂದೇ ಪರಿಭಾವಿಸಲಾಗುತ್ತಿದೆ.
ಇದನ್ನೂ ಓದಿ: ಚೀನಾ ವಿರುದ್ಧ ಸಮರಕ್ಕೆ ಅಮೆರಿಕ ಸೇನೆಯ ಬೆಂಬಲ ಭಾರತಕ್ಕೆ ಎಂದ ಟ್ರಂಪ್
ಪ್ರಧಾನಿ ಹುದ್ದೆ ತೊರೆಯುವಂತೆ ತಮ್ಮ ಮೇಲೆ ಒತ್ತಡ ಹೇರಿದ್ದೇ ಆದಲ್ಲಿ, 2018ರಲ್ಲಿ ಸ್ಥಾಪನೆಗೊಂಡಿದ್ದ ನೇಪಾಳ ಕಮ್ಯುನಿಸ್ಟ್ ಪಾರ್ಟಿಯನ್ನು ವಿಭಜನೆ ಮಾಡುವುದು ನಿಶ್ಚಿತ ಎಂದು ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ.
ಆದರೆ, ನೇಪಾಳದಲ್ಲಿ ಓಲಿ ನೇತೃತ್ವದ ಸರ್ಕಾರವನ್ನು ಉಳಿಸಲು ಶತಾಯಗತಾಯ ಪ್ರಯತ್ನಿಸುತ್ತಿರುವ ಚೀನಾಕ್ಕೆ ನೇಪಾಳ ಕಮ್ಯುನಿಸ್ಟ್ ಪಾರ್ಟಿಯಲ್ಲಿ ಒಡಕು ಮೂಡುವುದು ಸುತರಾಂ ಇಷ್ಟವಿಲ್ಲ. ನೇಪಾಳದಲ್ಲಿನ ಚೀನಾದ ರಾಯಭಾರಿ ಹೌ ಯಾಂಕಿ ಕೂಡ ನೇಪಾಳದ ಮುಖಂಡರೊಂದಿಗಿನ ಮಾತುಕತೆಯಲ್ಲಿ ಪಕ್ಷ ವಿಭಜನೆಗೆ ಆಸ್ಪದ ನೀಡದಂತೆ ಮನವಿ ಮಾಡಿಕೊಳ್ಳುತ್ತಲೇ ಇದ್ದರು. ಆದರೂ, ಪಕ್ಷ ವಿಭಜನೆಯನ್ನು ತಡೆಯಲು ಅವರಿಗೂ ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ನಾನಾ? ನೀನಾ?… ಜೋಶ್ನಲ್ಲಿ ಬಾಲಾಪರಾಧಿ ಮಗನನ್ನು ಕುಸ್ತಿ ಪಂದ್ಯಕ್ಕೆ ಕರೆತಂದ , ಮುಂದೇನಾಯ್ತು?