ಭಟ್ಕಳ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿನ ಡಯಾಲಿಸ್ಸ್ ಘಟಕ ಬಂದ್ ಆದರೆ ರೋಗಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಘಟಕದ ಕಾರ್ಯನಿರ್ವಹಣೆಗೆ ನೆರವು ಒದಗಿಸಲಾಗುವುದು ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅವರಿಗೆ 50 ಸಾವಿರ ರೂಪಾಯಿ ಚೆಕ್ ಸೋಮವಾರ ಹಸ್ತಾಂತರಿಸಿ ಅವರು ಮಾತನಾಡಿದರು.
ತಾಲೂಕಿನ ಬಡ ರೋಗಿಗಳು ಡಯಾಲಿಸಸ್ ಕೇಂದ್ರದ ಉಪಯೋಗ ಪಡೆಯುತ್ತಿದ್ದಾರೆ. ಒಂದು ವೇಳೆ ಬಿಆರ್ಎಸ್ ಸಂಸ್ಥೆ ಘಟಕದ ಕಾರ್ಯ ನಿಲ್ಲಿಸಿದರೆ, ಇಲ್ಲಿನ ರೋಗಿಗಳಿಗೆ ತೊಂದರೆಯಾಗಲಿದೆ ಎನ್ನುವ ಅಂಶ ಗಂಭೀರವಾಗಿ ಪರಿಗಣಿಸಲಾಗಿದೆ. ಕ್ಷೇತ್ರದ ಭಟ್ಕಳ ಮತ್ತು ಹೊನ್ನಾವರದ ರೋಗಿಗಳಿಗೆ ತೊಂದರೆ ಆಗಬಾರದು ಎಂದು ವೈಯಕ್ತಿಕ ಸಹಾಯ ಮಾಡುತ್ತಿದ್ದೇನೆ. ಬಿಆರ್ಎಸ್ ಸಂಸ್ಥೆ ಮತ್ತು ಸರ್ಕಾರದ ನಡುವಿನ ತೀರ್ಮಾನ ಆಗುವವವರೆಗೂ ವೈಯಕ್ತಿಕ ಸಹಾಯ ಮುಂದುವರಿಯಲಿದೆ ಎಂದರು.
ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ, ಕೆಲವು ತಿಂಗಳ ಹಿಂದಿನಿಂದಲೂ ಬಿಆರ್ಎಸ್ ಡಯಾಲಿಸ್ಸ್ ಘಟಕಕ್ಕೆ ಸರ್ಕಾರಿ ಆಸ್ಪತ್ರೆ ವತಿಯಿಂದಲೇ ಪರಿಕರ ಒದಗಿಸಿ ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೋಳ್ಳಲಾಗಿದೆ. ಸರ್ಕಾರದ ಹಂತದಲ್ಲಿ ನಿರ್ಧಾರ ಆಗುವವರೆಗೂ ಶಾಸಕರು ಸಹಾಯಕ್ಕೆ ಮುಂದಾಗಿರುವುದು ಸಂತಸದ ಸಂಗತಿ ಎಂದರು.
ಡಾ.ಲಕ್ಷ್ಮೀಶ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ಮಾಜಿ ಅಧ್ಯಕ್ಷ ರಾಜೇಶ ನಾಯ್ಕ, ಮಾಜಿ ಯೋಧ ಶ್ರೀಕಾಂತ ನಾಯ್ಕ, ದಿನೇಶ ನಾಯ್ಕ, ವಿವೇಕ ನಾಯ್ಕ, ಪಾಂಡು ನಾಯ್ಕ ಇತರರು ಇದ್ದರು.