ನವದೆಹಲಿ : ರಾಜ್ಯಸಭಾ ಸದಸ್ಯ ಹಾಗೂ ನಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಮೋದಿ ಮತ್ತು ಪವಾರ್ ನಡುವೆ ಸುಮಾರು 50 ನಿಮಿಷಗಳ ಮಾತುಕತೆ ನಡೆಯಿತು ಎನ್ನಲಾಗಿದ್ದು, ಈ ಸಭೆಯ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ.
ಕೆಲವು ಸಮಯದಿಂದ ಪವಾರ್, ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಅಪೇಕ್ಷೆ ಹೊಂದಿದ್ದು, ಇಂದು ಅದಕ್ಕೆ ಕಾಲ ಕೂಡಿಬಂದಿತು ಎನ್ನಲಾಗಿದೆ. ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುವ ಎರಡು ದಿನಗಳ ಮುನ್ನ ಈ ಭೇಟಿ ನಡೆದಿದೆ.
ಇದನ್ನೂ ಓದಿ: ಅಕ್ರಮ ಗಣಿಗಾರಿಕೆ: ರಾಜ್ಯಪಾಲರ ಮೊರೆ ಹೋದ ಸಂಸದೆ ಸುಮಲತಾ
ಜೊತೆಗೆ ಮಹಾರಾಷ್ಟ್ರದಲ್ಲಿ ಎನ್ಸಿಪಿ ಮತ್ತು ಶಿವಸೇನೆಯೊಂದಿಗಿನ ನಂಟಿನಲ್ಲಿ ಭಿನ್ನಾಭಿಪ್ರಾಯ ತೋರಿಬಂದಿದೆ ಎಂಬ ಮಾತುಗಳು ಕೇಳಿಬಂದಿವೆ. ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಪವಾರ್ ಅವರು ಅಭ್ಯರ್ಥಿ ಆಗಬಹುದೆಂಬ ಊಹೆಗಳೂ ಇತ್ತೀಚೆಗೆ ಮೂಡಿಬಂದಿದ್ದವು.
ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವ ಎನ್ಸಿಪಿಯ ಮುಖ್ಯಸ್ಥರಾಗಿರುವ ಪವಾರ್, ನೂತನವಾಗಿ ರಚಿಸಲಾಗಿರುವ ಕೇಂದ್ರ ಸಹಕಾರ ಸಚಿವಾಲಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಹಾಗೂ ರೈತರ ವಿಚಾರಗಳನ್ನು ಪ್ರಧಾನಿಯೊಂದಿಗೆ ಚರ್ಚೆ ಮಾಡಿದರು ಎಂದು ಎನ್ಸಿಪಿ ಮೂಲಗಳು ಹೇಳಿವೆ. ಸಹಕಾರಿ ಕ್ಷೇತ್ರದಲ್ಲಿ ಕಾನೂನು ರಚಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಸೇರಿದ್ದು, ಕೇಂದ್ರದಲ್ಲಿ ಸಹಕಾರ ಸಚಿವಾಲಯ ಮಾಡುವುದು ಸಂವಿಧಾನದ ಉಲ್ಲಂಘನೆಯಾದೀತೆಂದು ಪವಾರ್ ಇತ್ತೀಚೆಗೆ ಮೋದಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ. (ಏಜೆನ್ಸೀಸ್)