ನಾಯಕನಹಟ್ಟಿ: ಅಮ್ಮ… ಅಪ್ಪಾಜಿ ಪ್ಲೀಸ್ ನಮ್ಮನ್ನು ಊರಿಗೆ ಕರೆದುಕೊಂಡು ಹೋಗಿ…
ಇದು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಿನಿಮಯ ಯೋಜನೆಯಡಿ ವ್ಯಾಸಂಗಕ್ಕಾಗಿ ಮಧ್ಯಪ್ರದೇಶಕ್ಕೆ ತೆರಳಿ ಲಾಕ್ಡೌನ್ಗೆ ಸಿಲುಕಿರುವ ಚಿತ್ರದುರ್ಗ ಜಿಲ್ಲೆ ಉಡುವಳ್ಳಿ ನವೋದಯ ಶಾಲೆ 23 ವಿದ್ಯಾರ್ಥಿಗಳು ಅಳಲು.
ಮಧ್ಯಪ್ರದೇಶದ ದೇವಾಸ್ ನವೋದಯ ಶಾಲೆಯಲ್ಲಿ ಒಂದು ವರ್ಷದ 9ನೇ ತರಗತಿ ವ್ಯಾಸಂಗ ಪೂರೈಸಿದ್ದು, ಮಾ.17ರಂದೇ ವಾರ್ಷಿಕ ಪರೀಕ್ಷೆ ಪೂರ್ಣಗೊಂಡಿದೆ.
ಇವರನ್ನು ತಮ್ಮೂರಿಗೆ ಕಳುಹಿಸಲು ಶಾಲೆ ಆಡಳಿತ ಮಂಡಳಿ ಮಾ.23ರಂದು ರೈಲು ಟಿಕೆಟ್ ಬುಕ್ ಮಾಡಿತ್ತು. ಇದೇ ದಿನ ಲಾಕ್ಡೌನ್ ಆದೇಶ ಹೊರಬಿದ್ದರಿಂದ ರೈಲು ಓಡಾಟ ಸ್ಥಗಿತಗೊಂಡು ವಿದ್ಯಾರ್ಥಿಗಳು ತಮ್ಮೂರಿಗೆ ಬರಲಾಗದೆ ಆತಂಕಕ್ಕೊಳಗಾಗಿದ್ದಾರೆ. ಪ್ರತಿದಿನ ಪಾಲಕರಿಗೆ ಫೋನ್, ವಿಡಿಯೋ ಕರೆ ಮಾಡಿ ತಮ್ಮನ್ನು ಕರೆದೊಯ್ಯುವಂತೆ ಕಣ್ಣೀರಿಡುತ್ತಿದ್ದಾರೆ.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಆದರೂ ಊರಿಗೆ ಹೋಗುವ, ಅಪ್ಪ ಅಮ್ಮನ ಮುಖ ನೋಡದ ಸ್ಥಿತಿ ಬಂದೊದಗಿದೆ. ಈ ಮೇ 3ರ ವರೆಗೆ ಲಾಕ್ಡೌನ್ ಮುಂದುವರಿಸಿರುವುದು ಪಾಲಕರು ಮತ್ತು ಮಕ್ಕಳಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.
ಕೂಡಲೇ ನಮ್ಮ ಮಕ್ಕಳನ್ನು ಕರೆತರುವ ವ್ಯವಸ್ಥೆ ಮಾಡಬೇಕೆಂದು ಪಾಲಕರಾದ ಜಿ.ಪಾಲಯ್ಯ, ತಿಪ್ಪೇಸ್ವಾಮಿ, ಚಂದ್ರಶೇಖರ್, ರಮೇಶ್, ಓಬಣ್ಣ, ರಾಜಣ್ಣ, ರಂಗನಾಥ್, ಜಯಪ್ಪ ಇತರರು ಸರ್ಕಾರವನ್ನು ಆಗ್ರಹಿಸಿದ್ದಾರೆ.