ನಾಯಕನಹಟ್ಟಿ: ಜಿಲ್ಲೆಯ ದೊಡ್ಡ ಹೋಬಳಿ ಕೇಂದ್ರ ನಾಯಕನಹಟ್ಟಿಯನ್ನು ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸಬೇಕೆಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಕೇಂದ್ರವಾಗುವ ಎಲ್ಲ ಅರ್ಹತೆ, ಘನತೆ ನಾಯಕನಹಟ್ಟಿಗೆ ಇದೆ. ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ನಿತ್ಯ ಸಾವಿರಾರು ಮಂದಿ ನಾಡಿನ ವಿವಿಧೆಡೆಯಿಂದ ಆಗಮಿಸುತ್ತಾರೆ ಎಂದರು.
ಪಟ್ಟಣದ ಸುತ್ತಲೂ 55ಕ್ಕೂ ಹೆಚ್ಚು ಗ್ರಾಮಗಳಿವೆ. ಡಿಆರ್ಡಿಒ ಸೇರಿ ದೇಶದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳು ಪಟ್ಟಣದ ಸಮೀಪದಲ್ಲಿ ತಲೆಎತ್ತಿವೆ. ಆದ್ದರಿಂದ ನಾಯಕನಹಟ್ಟಿಯನ್ನು ತಾಲೂಕು ಎಂದು ಘೋಷಿಸಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ, ಸಚಿವ ಬಿ.ಶ್ರೀರಾಮುಲು ತಮ್ಮ ಪ್ರಭಾವ ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು.