ನಾಯಕನಹಟ್ಟಿ: ಬೇರೆ ಜಿಲ್ಲೆಗಳಿಂದ ಹಳ್ಳಿಗಳಿಗೆ ಬರುವ ವ್ಯಕ್ತಿಗಳ ಮಾಹಿತಿ ಪಡೆದು ಕಡ್ಡಾಯವಾಗಿ ಕ್ವಾರಂಟೈನ್ ಒಳಪಡಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್.ಯರ್ರಿಸ್ವಾಮಿ ಹೇಳಿದರು.
ಸಮೀಪದ ಮಲ್ಲೂರಹಳ್ಳಿ ಗ್ರಾಪಂನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಪಡೆ ಸಭೆಯಲ್ಲಿ ಮಾತನಾಡಿ, ಲಾಕ್ಡೌನ್ ಘೋಷಿಸಿದ ನಂತರ ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಂಗಳೂರಿನಿಂದ 400 ಹಾಗೂ ರಾಜ್ಯದ ಇತರೆ ಭಾಗದಿಂದ 56 ಕಾರ್ಮಿಕರು ಬಂದಿದ್ದಾರೆ ಎಂದರು.
ಕಳೆದ ಎರಡು ದಿನಗಳಿಂದ ರೇಖಲಗೆರೆ ಲಂಬಾಣಿಹಟ್ಟಿಗೆ 13 ಜನ ದಾವಣಗೆರೆಯಿಂದ ಬಂದಿದ್ದಾರೆ. ಅವರನ್ನು ಮನೆಯಲ್ಲಿಯೇ ಕ್ವಾರಂಟೈನ್ಗೆ ಒಳಪಡಿಸಬೇಕು. ಮದುವೆ ಸೇರಿ ಹಲವು ಶುಭ ಸಮಾರಂಭಗಳ ನೆಪ ಹೇಳಿ ಗ್ರಾಮಕ್ಕೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚಾಗಿದೆ. ಅದನ್ನು ತಡೆಯಬೇಕು ಎಂದು ಸೂಚಿಸಿದರು.
ಗ್ರಾಪಂ ಅಧ್ಯಕ್ಷ ಎಂ.ಸಿ.ರಾಜಣ್ಣ, ಮಹಾಂತೇಶ್, ತಮ್ಮಣ್ಣ, ಎಸ್.ಒ.ತಿಪ್ಪೇಸ್ವಾಮಿ, ಚಂದ್ರಣ್ಣ, ಕಾರ್ಯದರ್ಶಿ ಕೆಂಚಪ್ಪ ಇದ್ದರು.