ನಾಯಕನಹಟ್ಟಿ: ಪಟ್ಟಣದ ಒಳ ಮಠದ ಬಳಿ ಇರುವ ಐತಿಹಾಸಿಕ ವಿಜಯ ವೀರಭದ್ರಸ್ವಾಮಿ ದೇಗುಲದಲ್ಲಿ ಶನಿವಾರ ಆಶ್ಲೇಷ ಬಲಿ ಪೂಜೆ ನಡೆಯಿತು.
ಪ್ರತಿ ತಿಂಗಳು ನಿಗದಿತ ದಿನಾಂಕದಂದು ಜರುಗಲಿರುವ ಆಶ್ಲೇಷ ಬಲಿ ಪೂಜೆ, ಈ ಭಾಗದಲ್ಲಿ ಹೆಚ್ಚು ಮಹತ್ವ ಪಡೆಯುತ್ತಿದೆ. ಸಾಮಾನ್ಯವಾಗಿ ಆಶ್ಲೇಷ ಬಲಿ ಪೂಜೆ ಮಾಡಿಸಲು ಕುಕ್ಕೆ ಸುಬ್ರಮಣ್ಯ, ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯಕ್ಕೆ ಹೋಗಬೇಕಿದೆ. ಇದೀಗ ಭಕ್ತರ ಕೋರಿಕೆ ಮೇರೆಗೆ ಇಲ್ಲಿನ ವೀರಭದ್ರಸ್ವಾಮಿ ದೇಗುಲದಲ್ಲೇ ವಿಶೇಷ ಪೂಜೆ ಏರ್ಪಡಿಸಲಾಗುತ್ತಿದೆ.
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ, ದಾವಣಗೆರೆ, ಬೆಂಗಳೂರಿನಿಂದಲೂ ಹೆಚ್ಚು ಭಕ್ತರು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಈ ಬಾರಿ ಆಂಧ್ರದ ರಾಯದುರ್ಗದ ಭಕ್ತರೊಬ್ಬರು ಬಂದಿರುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಿದ್ದರು. ದೇಗುಲ ಸಮಿತಿ ಪೂಜೆಗೆ ಬೇಕಾದಂತಹ ಸಕಲ ವ್ಯವಸ್ಥೆ ಕಲ್ಪಿಸಲಿದೆ ಎಂದು ಕಾರ್ಯದರ್ಶಿ ವಿ.ತಿಪ್ಪೇಸ್ವಾಮಿ ಹೇಳಿದರು.
ಶ್ರಾವಣ ಮಾಸದ ಆಶ್ಲೇಷ ಬಲಿ ಪೂಜೆಗೆ 30 ಮಂದಿ ಹೆಸರು ನೋಂದಣಿ ಮಾಡಿಸಿದ್ದರು. ಕಳೆದ 8 ತಿಂಗಳಿಂದ ಪ್ರತಿ ಬಾರಿಯೂ ಅರ್ಚಕರನ್ನು ಬೆಂಗಳೂರಿನಿಂದ ಕರೆಸಿ ಪೂಜೆಗೆ ಏರ್ಪಾಡು ಮಾಡಲಾಗುತ್ತದೆ. ಸ್ಥಳೀಯ ಅರ್ಚಕರೊಂದಿಗೆ ವ್ಯವಸ್ಥಿತವಾಗಿ ಪೂಜೆ ನೆರವೇರಿಸಲಾಗುತ್ತದೆ ಎಂದು ದೇವಸ್ಥಾನ ಸಮಿತಿಯ ಶಿವಕುಮಾರ್ ಭಂಡಾರಿ ತಿಳಿಸಿದರು.