ನಾಯಕನಹಟ್ಟಿ: ಕರೊನಾಗೆ ಹೆದರಿದ ಹಳ್ಳಿಗಾಡಿನ ಜನ ಅನ್ಯರು ಗ್ರಾಮಗಳಿಗೆ ಪ್ರವೇಶಿಸದಂತೆ ಮುಳ್ಳಿನ ಬೇಲಿಯನ್ನು ಹಾಕಿ ದಿಗ್ಬಂಧನ ವಿಧಿಸಿಕೊಳ್ಳುತ್ತಿದ್ದಾರೆ.
ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ 65 ಹೋಬಳಿಯ ಮುಸ್ಟಲಗುಮ್ಮಿ, ಮಲ್ಲೇಬೋರನಹಟ್ಟಿ, ಅಬ್ಬೇನಹಳ್ಳಿ ತೊರೆಕೋಲಮ್ಮನಹಳ್ಳಿ ಮೂಲಕ ಹಾದು ಹೋಗಿದ್ದು, ಮಲ್ಲೇಬೋರನಹಟ್ಟಿಯಲ್ಲಿ ರಾಜ್ಯ ಹೆದ್ದಾರಿಗೆ ಮುಳ್ಳಿನ ಬೇಲಿ ಹಾಕಿದ್ದಾರೆ.
ಅನ್ಯ ಗ್ರಾಮದವರು ನಮ್ಮ ಊರಿಗೆ ಬಂದು ಕಾಯಿಲೆ ಹರಡದಂತೆ ಮುನ್ನೇಚ್ಚರಿಕೆ ಕ್ರಮಕೈಗೊಂಡಿದ್ದಾರೆ. ಏ.14ರ ವರೆಗೆ ಇಡೀ ದೇಶವೇ ಲಾಕ್ಡೌನ್ ಆಗಿರುವುದರಿಂದ ನಮ್ಮ ಗ್ರಾಮವನ್ನು ಈ ರೀತಿಯಾಗಿ ಬೇಲಿ ಮೂಲಕ ದಿಗ್ಬಂಧನ ಹಾಕಲಾಗಿದೆ ಎನ್ನುತ್ತಾರೆ ಮುಸ್ಟಲಗುಮ್ಮಿ ಗ್ರಾಮದ ವಿಶ್ವನಾಥ್.
ಈವರೆಗೂ ನಮ್ಮ ಊರಿಗೆ ಬೆಂಗಳೂರು ಮತ್ತಿತರ ಕಡೆಯಿಂದ ಯಾರೂ ಬಂದಿಲ್ಲ. ನಾವು ಚೆನ್ನಾಗಿದ್ದೇವೆ. ಮಕ್ಕಳಿಗೆ ವೃದ್ಧರಿಗೆ ಯಾವುದೇ ತೊಂದರೆಯಾಗಬಾರದು. ನಮ್ಮ ಊರಿನ ಮಧ್ಯೆ ರಾಜ್ಯ ಹೆದ್ದಾರಿ 65 ಹಾದು ಹೋಗಿರುವುದರಿಂದ ಕಳೆದ ನಾಲ್ಕೈದು ದಿನಗಳಿಂದ ಆಟೋ, ಕಾರುಗಳ ಓಡಾಟ ಬಹಳ ಆಗಿತ್ತು. ಆದ್ದರಿಂದ ಗ್ರಾಮಸ್ಥರೆಲ್ಲರೂ ಸೇರಿ ಮುಳ್ಳಿನ ಬೇಲಿ ಹಾಕಿದ್ದೇವೆ.
ಆಂಬುಲೆನ್ಸ್, ಪೊಲೀಸ್, ಆಸ್ಪತ್ರೆ ಸಿಬ್ಬಂದಿಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ಉಳಿದಂತೆ ಹಗಲು ರಾತ್ರಿ ಕಾವಲು ಕಾಯುವ ಯೋಜನೆ ಹಾಕಿಕೊಂಡಿದ್ದೇವೆ ಎಂಬುದು ಮಲ್ಲೇಬೋರನಹಟ್ಟಿ ಬೋರಣ್ಣ ಹೇಳಿಕೆ.
ಇದಲ್ಲದೇ ಪಕ್ಕದ ಕೂಡ್ಲಿಗಿ ತಾಲ್ಲೂಕಿನ ಹುಡೇಂ, ತಾಯಕನಹಳ್ಳಿ, ವಿವಿಧ ಗ್ರಾಮಗಳಲ್ಲಿ ಈರೀತಿಯಾಗಿ ಸ್ವಯಂ ದಿಗ್ಬಂಧನವನ್ನು ಹಾಕಿಕೊಳ್ಳಲಾಗಿದೆ.