ಶಿಕಾರಿಪುರ: ನವರಾತ್ರಿಯ ಪ್ರಯುಕ್ತ ನಗರದ ಎಲ್ಲಾ ದೇವಾಲಯಗಳಲ್ಲಿ ದೇವಿಗೆ ವಿಶೇಷ ಅಲಂಕಾರ, ಪೂಜೆ ನಡೆಯುತ್ತಿದೆ. ನಗರದ ಅಧಿದೇವತೆ ಶ್ರೀ ಮಾರಿಕಾಂಬಾ, ಶ್ರೀ ಚೌಡೇಶ್ವರಿ ಅಮ್ಮ, ಶಿರಸಿ ಮಾರಿಕಾಂಬಾ, ಸಾಲೂರು, ಶಿರಾಳಕೊಪ್ಪ, ಕಡೇನಂದಿಹಳ್ಳಿ ಮುಂತಾದ ಕಡೆಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.
ಶಿಕಾರಿಪುರದ ಅರಸುನಗರದಲ್ಲಿ ವಿಶೇಷವಾಗಿ ಸಂಪ್ರದಾಯದಂತೆ ಬನ್ನಿಕಟ್ಟೆ ಪೂಜೆ ಹಾಗೂ ನಾಗಪ್ರತಿಷ್ಠೆ ಕಾರ್ಯಕ್ರಮ ಮಂಗಳವಾರ ರಾತ್ರಿ ದೇವಸ್ಥಾನ ಸಮಿತಿ ಅಧ್ಯಕ್ಷ, ಪುರಸಭೆ ಸದಸ್ಯ ಪ್ರಶಾಂತ್ ಜೀನಳ್ಳಿ ನೇತೃತ್ವದಲ್ಲಿ ನಡೆಯಿತು. ಪುರೋಹಿತರಾದ ಹರೀಶ್ ಭಟ್, ಪ್ರಕಾಶ್ ಭಟ್ ನಡೆಸಿಕೊಟ್ಟರು.
ಪುರಸಭೆ ಸದಸ್ಯ ಪ್ರಶಾಂತ್ ಜೀನಳ್ಳಿ ಮಾತನಾಡಿ, ನವರಾತ್ರಿ ನಮಗೆ ವಿಶೇಷ ಹಬ್ಬ. ಬರಗಾಲ ಇದ್ದರೂ ಕೂಡ ಈ ಮಣ್ಣಿನ ಸಂಸ್ಕೃತಿ, ಆಚಾರ ವಿಚಾರ, ಸಂಪ್ರದಾಯವನ್ನು ಬಿಡಲು ಸಾಧ್ಯವಿಲ್ಲ. ತಾಯಿ ಭಗವತಿ ಅಮ್ಮನವರ ಅನುಗ್ರಹದಿಂದ ರೈತಾಪಿ ಜನರ ಸಂಕಷ್ಟಗಳು ನೀಗಲಿ. ಮಳೆ ಬೆಳೆ ಸಮೃದ್ಧಿಯಾಗಲಿ ಎಂದರು. ಪ್ರಮುಖರಾದ ರವಿ, ಮಲ್ಲನಾಯ್ಕ್, ಮಾಲತೇಶ್, ಪ್ರತಾಪ್ ಸಿಂಗ್, ಭೈರನಹಳ್ಳಿ ಸಂತೋಷ್, ಶಿವು, ನಾಗರಾಜ್ ಇತರರಿದ್ದರು.