ಬೆಂಗಳೂರು: ‘ಸುದ್ದಿಯಲ್ಲಿ ಸದಾ ಮುಂದೆ’ ಇರುವ ದಿಗ್ವಿಜಯ ನ್ಯೂಸ್ ಚಾನೆಲ್ ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ದಾಖಲೆಗೆ ಭಾಷ್ಯ ಬರೆಯುತ್ತಲೇ ಇದೆ. ಸದಾ ಹೊಸತನದೊಂದಿಗೆ ವಸ್ತುನಿಷ್ಠ ಮಾಹಿತಿಯನ್ನು ಜನರ ಮುಂದಿಡುವುದರೊಂದಿಗೆ ಸಮಾಜಮುಖಿ ಕಾರ್ಯಗಳಲ್ಲೂ ನಿರಂತರವಾಗಿ ತೊಡಗಿಸಿಕೊಂಡಿರುವ ದಿಗ್ವಿಜಯ ನ್ಯೂಸ್ಗೆ ರಾಷ್ಟ್ರೀಯ ಗೌರವ ಒಲಿದಿದೆ.
ಉತ್ತರದ ಪ್ರವಾಹದಿಂದ ಹಿಡಿದು, ಜನಸಾಮಾನ್ಯರ ಕಷ್ಟಗಳು, ಅನ್ಯಾಯದ ವಿರುದ್ಧ ದನಿಯೆತ್ತಿದ ದಿಗ್ವಿಜಯ ವಾಹಿನಿಗಿಂದು ಮರೆಯಲಾಗದ ದಿನ. ಕರೊನಾದಂತಹ ಸಂಕಷ್ಟದ ಸಮಯದಲ್ಲೂ ವೃತ್ತಿಪರತೆ ಮರೆಯದೆ ಎಲ್ಲ ಎಚ್ಚರಿಕಾ ಕ್ರಮಗಳನ್ನ ಕೈಗೊಂಡು ಜನರ ಪರ ನಿಂತ ಕರ್ನಾಟಕದ ದಿಗ್ವಿಜಯ ವಾಹಿನಿಗೆ ಇಂದು(ಶುಕ್ರವಾರ) ರಾಷ್ಟ್ರಮಟ್ಟದಲ್ಲಿ ಗೌರವ ಸಂದಿದೆ. ರಾಷ್ಟ್ರೀಯ ಮಟ್ಟದಲ್ಲಿ ವಾರ್ತಾ ವಾಹಿನಿಗಳಿಗೆ ನೀಡಲಾಗುವ ಪ್ರತಿಷ್ಠಿತ ನ್ಯಾಷನಲ್ ಟೆಲಿವಿಷನ್ ಅವಾರ್ಡ್ಸ್-2020ರಲ್ಲಿ “ದಿಗ್ವಿಜಯ 24*7 ನ್ಯೂಸ್’’ ಚಾನಲ್ಗೆ 7 ವಿಭಾಗದಲ್ಲಿ ಪ್ರಶಸ್ತಿ ಸಂದಿದೆ.
ಶುಕ್ರವಾರ ಈ ಪ್ರಶಸ್ತಿಗಳನ್ನು ಘೊಷಣೆ ಮಾಡಲಾಗಿದ್ದು, ದೇಶದ ಅನೇಕ ನ್ಯೂಸ್ ಚಾನೆಲ್ಗಳ ನಡುವೆ ಸ್ಪರ್ಧೆಯಲ್ಲಿ ದಿಗ್ವಿಜಯ ನ್ಯೂಸ್ಗೆ ಬೆಸ್ಟ್ ನ್ಯೂಸ್ ಬುಲೆಟಿನ್(ನ್ಯೂಸ್ ಔಟ್ಲುಕ್), ಬೆಸ್ಟ್ ನ್ಯೂಸ್ ಡಿಬೇಟ್(ಮೆಗಾ ಡಿಬೇಟ್), ಬೆಸ್ಟ್ ನ್ಯೂಸ್ ಪ್ರೆಸೆಂಟರ್(ಮಮತಾ ಹೆಗ್ಡೆ), ‘ಬೆಸ್ಟ್ ಪ್ರೈಮ್ ಟೈಮ್ ನ್ಯೂಸ್ ಪ್ರೆಸೆಂಟರ್(ರಕ್ಷಿತ್ ಶೆಟ್ಟಿ), ಬೆಸ್ಟ್ ರಿಪೋರ್ಟರ್(ಅಶೋಕ್ ಮಂಗಳೂರು), ಬೆಸ್ಟ್ ಪ್ರೋಮೋ ಕ್ಯಾಂಪೇನ್ ಕನ್ನಡ(ಕರೊನಾ ಜಾಗೃತಿ ಪ್ರೋಮೋ), ಬೆಸ್ಟ್ ಸ್ಟಿಂಗ್ ಬೈ ನ್ಯೂಸ್ ಚಾನೆಲ್ ಕನ್ನಡ(ಬೆಗ್ಗರ್ಸ್ ಕಾಲನಿ ಸ್ಟಿಂಗ್) ವಿಭಾಗದಲ್ಲಿ ಪ್ರಶಸ್ತಿಗಳು ಲಭಿಸಿವೆ.
ಡಾ. ವಿಜಯ ಸಂಕೇಶ್ವರ ಅಭಿನಂದನೆ
ದಿಗ್ವಿಜಯ ವಾಹಿನಿ ಪ್ರಶಸ್ತಿಗೆ ಭಾಜನವಾಗಿರುವುದಕ್ಕೆ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಅಭಿನಂದಿಸಿದ್ದಾರೆ. ರಾಷ್ಟ್ರ ಮಟ್ಟದ ಪ್ರಶಸ್ತಿ ಗಳಿಸಿರುವುದು ಅತ್ಯಂತ ಸಂತೋಷ ತಂದಿದೆ. ವಾಹಿನಿಯು ತನ್ನ ಸಮಾಜಮುಖಿ ಕಾರ್ಯ ಮುಂದುವರಿಸಲಿ ಎಂದು ಆಶಿಸಿದ್ದಾರೆ.
ಆನಂದ ಸಂಕೇಶ್ವರ ಸಂತಸ
ಸಮಸ್ತ ಕನ್ನಡಿಗರ ದನಿಯಾಗಿರುವ ದಿಗ್ವಿಜಯ ನ್ಯೂಸ್ಗೆ ಏಳು ರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿರುವುದು ದಿಗ್ವಿಜಯ ತಂಡದ ಶ್ರಮಕ್ಕೆ ಸಂದ ಗೌರವ. ಸುದ್ದಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೆ ವಿಶ್ವಾಸಾರ್ಹತೆ, ಗುಣಮಟ್ಟ, ಉನ್ನತ ಮಟ್ಟದ ತಂತ್ರಾನದ ಮೂಲಕ ನಾವು ಜನರನ್ನು ತಲುಪಿರುವುದಕ್ಕೆ ಈ ರಾಷ್ಟ್ರೀಯ ಪ್ರಶಸ್ತಿಗಳು ದ್ಯೋತಕ. ದಿಗ್ವಿಜಯ ವಾಹಿನಿಯನ್ನು ಮೆಚ್ಚಿ ಬೆಂಬಲಿಸಿ, ಈ ಸಾಧನೆಗೆ ಕಾರಣರಾದ ಕೋಟಿ ಕೋಟಿ ಕನ್ನಡಿಗರಿಗೆ ವಂದನೆಗಳು ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ಹೇಳಿದ್ದಾರೆ.
ಪ್ರಶಸ್ತಿ ವಿವರಗಳು
1. ನ್ಯೂಸ್ ಔಟ್ಲುಕ್
ಪ್ರತಿನಿತ್ಯ ರಾತ್ರಿ 8.27ರಿಂದ 9.27ರವರೆಗೆ ಒಂದು ಗಂಟೆಗಳ ಕಾಲ, ದಿನದ ಸಮಗ್ರ ಸುದ್ದಿಗಳನ್ನ ಬಿತ್ತರಿಸೋ ಪ್ರೈಮ್ಟೈಮ್ ಬುಲೆಟಿನ್ ಇದಾಗಿದೆ. ಇಲ್ಲಿ ಸ್ಥಳೀಯ ಸುದ್ದಿಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಗಳನ್ನು ಪ್ರಕಟಿಸಲಿದೆ. ಪ್ರಾದೇಶಿಕ ಮಟ್ಟದ ಬೆಸ್ಟ್ ನ್ಯೂಸ್ ಬುಲೆಟಿನ್ ಎನಿಸಿಕೊಂಡಿದೆ.
2. ಅತ್ಯುತ್ತಮ ಚರ್ಚಾ ಕಾರ್ಯಕ್ರಮ- ಮೆಗಾ ಡಿಬೇಟ್
ರಾಜ್ಯದ ಹಾಗೂ ದೇಶದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಈ ಪೈಕಿ ಕರ್ನಾಟಕ ಸರ್ಕಾರ ಟಿಪ್ಪು ಜಯಂತಿ ಬ್ಯಾನ್ ಬಗ್ಗೆ ನಿರ್ಣಯ ಕೈಗೊಂಡಾಗ ಈ ಬಗ್ಗೆ ಡಿಬೇಟ್ ನಡೆಸಿ ಎಲ್ಲರ ಗಮನ ಸೆಳೆದಿತ್ತು.
3. ಅತ್ಯುತ್ತಮ ಸ್ಟಿಂಗ್ ಆಪರೇಷನ್- ಬೆಗ್ಗರ್ಸ್ ಕಾಲೋನಿ ಸ್ಟಿಂಗ್
ಕಾಮಾಕ್ಷಿಪಾಳಯದಲ್ಲಿರೋ ಬೆಗ್ಗರ್ಸ್ ಕಾಲೋನಿ ಅನಾಥರು ಹಾಗೂ ಭಿಕ್ಷುಕರ ಕೇಂದ್ರ. ಆದ್ರೆ ಅಲ್ಲಿನ ಸಿಬ್ಬಂದಿ ದಾರಿಯಲ್ಲಿ ಹೋಗುವ ಇಳಿ ವಯಸ್ಸಿನವರನ್ನೆಲ್ಲ ಹಿಡಿದು ತಂದು, ಅಲ್ಲಿ ಕೂಡಿ ಹಾಕಿ ಅನಾಥರು ಎಂಬಂತೆ ಬಿಂಬಿಸ್ತಾ ಇದ್ದರು. ಈ ಬಗ್ಗೆ ದಿಗ್ವಿಜಯ ನ್ಯೂಸ್ ನಡೆಸಿದ ಸ್ಟಿಂಗ್ ಆಪರೇಷನ್ ಭಿಕ್ಷುಕರ ಕೇಂದ್ರದಲ್ಲಿ ನಡೆಯುತ್ತಿದ್ದ ಅಕ್ರಮವನ್ನು ಬಯಲಿಗೆ ಎಳೆದಿತ್ತು. ಆ ಮೂಲಕ ಅಲ್ಲಿದ್ದ ಅಮಾಯಕ ವೃದ್ಧರ ಬಿಡುಗಡೆಗೆ ಕಾರಣವಾಗಿತ್ತು. ಸರ್ಕಾರದ ಪ್ರಶಂಸೆಗೂ ‘ದಿಗ್ವಿಜಯ ನ್ಯೂಸ್’ ಪಾತ್ರವಾಗಿತ್ತು.
4. ಅತ್ಯುತ್ತಮ ಜನಜಾಗೃತಿ ಪ್ರೋಮೋ- ಕರೊನಾ ಅವೇರ್ನೆಸ್ ಪ್ರೋಮೋ
ಕರೊನಾ ಕಾಲಿಟ್ಟ ಆರಂಭಿಕ ಕಾಲದಲ್ಲಿ ಬೆಳಗಾವಿಯಲ್ಲಿ ಮನಮಿಡಿಯೋ ಘಟನೆಯೊಂದು ನಡೆದಿತ್ತು. ಕರೊನಾ ವಾರಿಯರ್ ತಾಯಿಯನ್ನ ಎಷ್ಟೋ ದಿನದಿಂದ ನೋಡದೇ ಅಳುತ್ತಿದ್ದ ಮಗುವನ್ನು ತಾಯಿ ಬಳಿ ಕರೆದೊಯ್ಯಲಾಗಿತ್ತು. ಕರೊನಾ ವಾರಿಯರ್ ಸ್ಥಿತಿ ಹೇಗಿರುತ್ತೆ? ಎಂದು ಅವರ ಸಂಕಷ್ಟಗಳನ್ನ ರಾಜ್ಯದ ಜನತೆಗೆ ತೋರಿಸಲಾಗಿತ್ತು. ಘಟನೆಯನ್ನು ಬಿತ್ತರಿಸಿತ್ತು. ಕರೊನಾ ವಾರಿಯರ್ಸ್ಗಳ ಕಷ್ಟಗಳನ್ನು ಇದರಲ್ಲಿ ತೋರಿಸಲಾಗಿತ್ತು. ಕರೊನಾ ಅವೇರ್ನೆಸ್ಗಾಗಿ ಈ ದೃಶ್ಯದ ಪ್ರೋಮೋ ಮಾಡಲಾಗಿತ್ತು. ಈ ವಿಚಾರ ಸಿಎಂ ಗಮನವನ್ನೂ ಸೆಳೆದಿತ್ತು.
5. ಅತ್ಯುತ್ತಮ ಪ್ರೈಮ್ ಟೈಮ್ ನಿರೂಪಕ- ರಕ್ಷತ್ ಶೆಟ್ಟಿ
ದಿಗ್ವಿಜಯ ನ್ಯೂಸ್ ನಿರೂಪಕರಲ್ಲಿ ಪ್ರಮುಖರಾದ ರಕ್ಷತ್ ಶೆಟ್ಟಿ, ರಾಜ್ಯದಲ್ಲಿ ನಡೆದ ವೆಂಟಿಲೇಟರ್ ಗೋಲ್ಮಾಲ್ ಬಗ್ಗೆ ವಿಸ್ತೃತವಾಗಿ ವರದಿ ನೀಡಿದ್ದರು. ಇಂಪ್ಯಾಕ್ಟ್ ಆದ ಈ ಸ್ಟೋರಿಗೆ ಸರ್ಕಾರವೂ ಪ್ರತಿಕ್ರಿಯಿಸಿತ್ತು. ಇದರ ನಿರೂಪಣೆಗೆ ಮೆಚ್ಚುಗೆ ನೀಡಿರೋ ನ್ಯಾಷನಲ್ ಟೆಲಿವಿಷನ್, ರಕ್ಷತ್ ಶೆಟ್ಟಿ ಅವರನ್ನ ಅತ್ಯುತ್ತಮ ನಿರೂಪಕ ಎಂದು ಗುರುತಿಸಿದೆ.
6 ಅತ್ಯುತ್ತಮ ನಿರೂಪಕಿ- ಮಮತಾ ಹೆಗ್ಡೆ
ಕರೊನಾದಿಂದ ಜನ ಸಂಕಷ್ಟದಲ್ಲಿದ್ದರೆ ಕೆಲ ಖಾಸಗಿ ಆಸ್ಪತ್ರೆಗಳು ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ಹೆಚ್ಚುವರಿ ಬಿಲ್, ಬೆಡ್ ಲೆಕ್ಕಾಚಾರದಲ್ಲಿ ಗೋಲ್ಮಾಲ್ ಮಾಡಿತ್ತು. ಈ ಬಗ್ಗೆ ದಿಗ್ವಿಜಯ ನ್ಯೂಸ್ನಲ್ಲಿ ಬಂದ ಸುದ್ದಿ, ಸರ್ಕಾರದ ಕಣ್ತೆರೆಸಿತ್ತು. ಇದರ ವಿಸ್ತೃತ ವರದಿ ನೀಡಿದ್ದ ನಿರೂಪಕಿ ಮಮತಾ ಹೆಗ್ಡೆಯನ್ನ ಅತ್ಯುತ್ತಮ ನಿರೂಪಕಿ ಎಂದು ನ್ಯಾಷನಲ್ ಟೆಲಿವಿಷನ್ ಗುರುತಿಸಿದೆ.
7. ಅತ್ಯುತ್ತಮ ವರದಿಗಾರ- ಅಶೋಕ್ ಪೂಜಾರಿ, ಮಂಗಳೂರು
ಸಿಎಎ ಹಾಗೂ ಎನ್ಆರ್ಸಿ ಜಾರಿ ಬೆನ್ನಲ್ಲೇ ದೇಶದ ಹಲವೆಡೆ ವ್ಯಾಪಕ ಪ್ರತಿಭಟನೆ ನಡೆಯಿತು. ಮಂಗಳೂರಲ್ಲಿ ಉದ್ರಿಕ್ತವಾಗಿದ್ದ ಹೋರಾಟ, ಗೋಲಿಬಾರ್ಗೂ ಸಾಕ್ಷಿಯಾಗಿತ್ತು. ಇಂಥಾ ಕಠಿಣ ಸಂದರ್ಭದಲ್ಲಿ ಸ್ಥಳದಿಂದ ಪಿನ್ ಟು ಪಿನ್ ಮಾಹಿತಿ ಕೊಟ್ಟ, ದಿಗ್ವಿಜಯ ನ್ಯೂಸ್ನ ಮಂಗಳೂರು ಪ್ರತಿನಿಧಿ ಅಶೋಕ್ ಪೂಜಾರಿಯನ್ನ ನ್ಯಾಷನಲ್ ಟೆಲಿವಿಷನ್ ಅತ್ಯುತ್ತಮ ವರದಿಗಾರ ಎಂದು ಗುರುತಿಸಿದೆ.
ನ್ಯಾಷನಲ್ ಟೆಲಿವಿಷನ್ ಆವಾರ್ಡ್ಸ್: ಇಂಡಿಯಾ ಟೆಲಿವಿಷನ್ ಡಾಟ್ ಕಾಮ್ ವತಿಯಿಂದ ಪ್ರತಿವರ್ಷ ನ್ಯಾಷನಲ್ ಟೆಲಿವಿಷನ್ ಆವಾರ್ಡ್ಸ್ ನೀಡಲಾಗುತ್ತದೆ. 500ಕ್ಕೂ ಹೆಚ್ಚು ಆಯ್ಕೆಗಳ ಪೈಕಿ ಈ ವರ್ಷದ ಪ್ರಶಸ್ತಿ ಘೊಷಣೆ ಮಾಡಬೇಕಿತ್ತು. ಪತ್ರಿಕೋದ್ಯಮದ ಖ್ಯಾತನಾಮರ 37 ಗಣ್ಯರ ಜ್ಯೂರಿಗಳು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.