ಮೈಸೂರು: ನಗರದ ಕೃಷ್ಣಮೂರ್ತಿಪುರಂನ ಎಂಎಂಕೆ ಮತ್ತು ಎಸ್ಡಿಎಂ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಎನ್ಐಇ ಕಾಲೇಜಿನ ಪ್ರಾಧ್ಯಾಪಕ ಡಾ.ನರಸಿಂಹ ಕೌಲ್ಗೂಡ್ ಮಾತನಾಡಿ, ಗೌತಮ ಬುದ್ಧ ಸಾವಿಲ್ಲದ ಮನೆಯಿಂದ ಸಾಸಿವೆ ಕಾಳು ತರುವಂತೆ ಹೇಳಿದ್ದ. ಆದರೆ, ಪ್ರಸ್ತುತ ಮೊಬೈಲ್ ಇಲ್ಲದ ಮನೆಗಳು ಇಲ್ಲದಂತಾಗಿದ್ದು, ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ ಎಂದು ಹೇಳಿದರು.
ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಮನುಷ್ಯನ ಬುದ್ಧಿವಂತಿಕೆಯ ಮುಂದೆ ಯಾವುದೂ ಸರಿಸಾಟಿಯಲ್ಲ. ಮನುಷ್ಯ ಸೃಷ್ಟಿಯ ಕಂಪ್ಯೂಟರ್ನಲ್ಲಿ ಮಾಹಿತಿ ಸಂಗ್ರಹವೇ ಇದೆ. ಹಾಗಂದ ಮಾತ್ರಕ್ಕೆ ಕಂಪ್ಯೂಟರ್ ಮನುಷ್ಯನಿಗಿಂತ ಶ್ರೇಷ್ಠವಾಗಲು ಸಾಧ್ಯವಿಲ್ಲ. ಮನುಷ್ಯನಿಗೆ ಚಿಂತಿಸುವ, ಕಲಿಯುವ ಅವಕಾಶಗಳು ಇವೆ. ಆದರೆ, ಕಂಪ್ಯೂಟರ್ ಹಾಗಲ್ಲ ಎಂದರು.
ವೇದಿಕೆಯಲ್ಲಿ ಪ್ರಾಂಶುಪಾಲ ಪ್ರೊ.ಸಾಯಿನಾಥ್ ಮಲ್ಲಿಗೆಮಾಡು, ಉಪಪ್ರಾಂಶುಪಾಲೆ ಎನ್. ಭಾರತಿ, ಐಕ್ಯೂಎಸಿ ಸಂಯೋಜಕಿ ಕೆ.ಎಸ್. ಸುಕೃತಾ, ಗಣಿತ ವಿಭಾಗದ ಮುಖ್ಯಸ್ಥೆ ಎನ್. ಚೈತ್ರಾ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿ. ಪವಿತ್ರಾ ಇದ್ದರು.