ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸುವ ಮೂಲಕ ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿ ರಚಿಸಿ ರಾಜ್ಯಕ್ಕೆ ಅನ್ವಯಿಸುವ ರೀತಿ, ಅನನ್ಯವಾಗಿರುವಂತೆ ವರದಿ ಸಿದ್ಧಪಡಿಸಲಾಗಿರುವುದು ಹೊಸ ಬೆಳವಣಿಗೆ.
ಮೆಕಾಲೆ ಶಿಕ್ಷಣ ನೀತಿಯನ್ನು ಸಂಪೂರ್ಣ ಬದಲಾಯಿಸಿ ನಮ್ಮತನದಿಂದ ಕೂಡಿರುವ ಶಿಕ್ಷಣ ನೀತಿ ಜಾರಿಗೆ ತರುವ ಆಶಯವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಕಾರ್ಯರೂಪಕ್ಕೆ ತರಲು ರಾಜ್ಯ ಸರ್ಕಾರ ತೀರ್ವನಿಸಿದೆ. ಈ ಸಂಬಂಧ ಮುಂದಿನ ಸಂಪುಟ ಸಭೆಯಲ್ಲಿ ವರದಿ ಚರ್ಚೆಗೆ ಬಂದು ಜಾರಿಗೊಳ್ಳಲಿದೆ. ಅದಕ್ಕಾಗಿ ದೊಡ್ಡ ಸಂಪರ್ಕ ಜಾಲವನ್ನೇ ರಾಜ್ಯ ಸರ್ಕಾರ ಸೃಷ್ಟಿ ಮಾಡಿದೆ. ವಿಶೇಷ ಶೈಕ್ಷಣಿಕ ವಲಯ ಗುರುತಿಸಿ (ಕಲ್ಯಾಣ ಕರ್ನಾಟಕ ಮಂಡಳಿ), ಲಿಂಗಾಧಾರಿತ, ದಿವ್ಯಾಂಗ ನಿಧಿ ಸ್ಥಾಪನೆಯ ಮೂಲಕ ಸಮಾನತೆಗೆ ಉತ್ತೇಜನ ನೀಡುವ ಉದ್ದೇಶವನ್ನು ಉನ್ನತ ಶಿಕ್ಷಣ ನೀತಿ ಒಳಗೊಂಡಿದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳ ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ವಿದ್ಯಾರ್ಥಿ ವೇತನ ದೊರೆಯಲಿದೆ.
ಶಾಲಾ ಸಂಕೀರ್ಣಗಳ ಸ್ಥಾಪನೆ ಸರ್ಕಾರಿ ಶಾಲೆಗಳ ಚಿತ್ರಣವನ್ನು ಬದಲಿಸುವ ಉದ್ದೇಶ ಹೊಂದಿದೆ. ಈ ವರದಿ ಶಿಫಾರಸು ಜಾರಿಯಷ್ಟೇ ಅಲ್ಲದೆ ರಾಜ್ಯ ಹಲವು ಗುರಿಗಳನ್ನೂ ಹೊಂದಿದೆ. ಕರ್ನಾಟಕ ಶಿಕ್ಷಣ ಆಯೋಗ (ಕೆಎಸ್ಎ) ಮತ್ತು ಕರ್ನಾಟಕ ಇತರ ಸಂಸ್ಥೆಗಳ ಸ್ಥಾಪನೆ ಕುರಿತು ಸರ್ಕಾರ ಆದೇಶ/ಸುಗ್ರೀವಾಜ್ಞೆ ಹೊಸಡಿಸುವ ಗುರಿ ಹೊಂದಿದೆ. ಅನುಷ್ಠಾನ ನಿಧಿ ಹಂಚಿಕೆ ಹಾಗೂ ಯೋಜನೆ ವಿವರ ಸಿದ್ಧಪಡಿಸಲು ವ್ಯಾಪಕ ಸಮಾಲೋಚನೆ ನಡೆಸಲು ಮುಕ್ತವಾಗಿದೆ.
ತಜ್ಞರೊಂದಿಗೆ ಸಿಎಂ ಸಭೆ: ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ವರದಿಯನ್ನು ಸಿಎಂ ಯಡಿಯೂರಪ್ಪ ಸ್ವೀಕರಿಸಿ ಯೋಜನೆಯ ಸಾಧಕ ಬಾಧಕಗಳ ಕುರಿತು ತಜ್ಞರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.
ನೀತಿ ಜಾರಿಯಿಂದ ಭವಿಷ್ಯದಲ್ಲಿ ರಾಜ್ಯದ ಶಿಕ್ಷಣ ರಂಗದಲ್ಲಾಗುವ ಕ್ರಾಂತಿಕಾರಕ ಬದಲಾವಣೆಗಳು, ಗುಣಮಟ್ಟ ಶಿಕ್ಷಣದ ಖಾತ್ರಿ, ದೇಶಕ್ಕೆ ರಾಜ್ಯ ಕೊಡಬಹುದಾದ ಶೈಕ್ಷಣೀಕ ಕೊಡುಗೆಗಳ ಬಗ್ಗೆ ರ್ಚಚಿಸಿದರು.
ಸಿಎಂ ಹೇಳಿದ್ದೇನು?: ಸಭೆಯ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ತರುವ ಕುರಿತು ಸಂಪುಟ ಸಭೆಯಲ್ಲಿ ರ್ಚಚಿಸಿ ಅನುಷ್ಠಾನಗೊಳಿಸಲಾಗುವುದೆಂದರು. ನೂತನ ಶಿಕ್ಷಣ ನೀತಿಯ ಸಾಧಕ ಬಾಧಕ ಕುರಿತು ಸುದೀರ್ಘ ಚರ್ಚೆ ನಡೆಸಿದ್ದೇವೆ. ದೇಶದಲ್ಲೇ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಲಿದೆ ಎಂದರು.
ಸಚಿವರಿಗೆ ಸೂಚನೆ: ಸಮಿತಿಯ ಶಿಫಾರಸುಗಳನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಮುಖ್ಯಮಂತ್ರಿಗಳು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಸಭೆಯಲ್ಲಿ ಸೂಚಿಸಿದರು. ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಾದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪೂರ, ವಾಸುದೇವ ಅತ್ರೆ, ಪೊ›. ಅನುರಾಗ್ ಬೆಹರ್ ಮತ್ತಿತರರು ಉಪಸ್ಥಿತರಿದ್ದರು.
175 ವರ್ಷಗಳ ನಂತರ ಭಾರತ ಸರ್ಕಾರ ತನ್ನದೇ ಆದ ಶಿಕ್ಷಣ ನೀತಿಯನ್ನು ರೂಪಿಸಿದೆ. ಈ ನೀತಿ ನಿರೂಪಣೆಯಲ್ಲಿ ಕರ್ನಾಟಕ ರಾಜ್ಯ ಮಹತ್ವದ ಪಾತ್ರ ವಹಿಸಿದೆ. ಶಿಕ್ಷಣ ವ್ಯವಸ್ಥೆಗೆ ಸರ್ಕಾರ ಹಾಗೂ ಸಮಾಜ ಹೆಚ್ಚಿನ ಒತ್ತು ನೀಡಬೇಕೆನ್ನುವುದು ಶಿಕ್ಷಣ ನೀತಿಯ ಆಶಯ .
| ಪ್ರೊ. ಎಂ.ಕೆ. ಶ್ರೀಧರ್ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ
ಟಾಸ್ಕ್ಫೋರ್ಸ್ನ ಪ್ರಮುಖ ಶಿಫಾರಸುಗಳು
ಶಾಲಾ ಶಿಕ್ಷಣ
- ಕೆಎಸ್ಎಸ್ಇಸಿ ಮತ್ತು ಎಸ್ಎಸ್ಎಸ್ಎಗಳು ಶಾಲೆಗಳ ನಿಯಂತ್ರಣ ಮತ್ತು ಕಾರ್ಯಾಚರಣೆಗಳ ಪ್ರತ್ಯೇಕತೆಯನ್ನು ಖಾತರಿ ಪಡಿಸಿಕೊಳ್ಳುವುದು, ಡಿಎಸ್ಇಆರ್ಟಿಯನ್ನು ಪುನರ್ ರಚಿಸುವುದು
- ಲಿಂಗಾಧಾರಿತ ಒಳಗೊಳ್ಳುವಿಕೆ ಮತ್ತು ದಿವ್ಯಾಂಗ ನಿಧಿಗಾಗಿ ಸಾಂಸ್ಥಿಕ ಸಾರ್ವಜನಿಕ ಜವಾಬ್ದಾರಿ (ಸಿಎಸ್ಆರ್)ಅಡಿ ಹಣವನ್ನು ಆಕರ್ಷಿಸುವುದು
- ಸಾಕಷ್ಟು ಸಂಖ್ಯೆಯ ವಿಶೇಷ ಶೈಕ್ಷಣಿಕ ವಲಯಗಳನ್ನು ಸ್ಥಾಪಿಸುವುದು
- ಎಲ್ಲ ರೀತಿಯ ವಿದ್ಯಾರ್ಥಿವೇತನಗಳಿಗೆ ಏಕ ವೇದಿಕೆಯನ್ನು ರೂಪಿಸುವುದು, ಅದರೊಂದಿಗೆ ದಿವ್ಯಾಂಗ, ವಿದ್ಯಾರ್ಥಿವೇತನವನ್ನು ಸ್ಥಾಪಿಸುವುದು.
ಉನ್ನತ ಶಿಕ್ಷಣ
- ಹೊಸ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ಕೆಎಸ್ಯುು) ಕಾಯ್ದೆ ಜಾರಿಗೆ ತರುವುದು
- ಮತ್ತೊಂದು ಹೊಸ ಕಾಯ್ದೆಯನ್ನು ಜಾರಿಗೆ ತಂದು ಅದರನ್ವಯ ಕರ್ನಾಟಕ ಉನ್ನತ ಶಿಕ್ಷಣ ಆಯೋಗವನ್ನು (ಕೆಹೆಚ್ಇಸಿ) ಸ್ಥಾಪಿಸಬೇಕು, ವಿಶೇಷ ಶೈಕ್ಷಣಿಕ ವಲಯಗಳನ್ನು ಗುರುತಿಸಿ ಸ್ಥಾಪಿಸಬೇಕು
- ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳಿಗೆ (ಇಎಸ್ಡಿಜಿ) ಅನ್ವಯವಾಗುವ ಎಲ್ಲ ವಿದ್ಯಾರ್ಥಿವೇತನಗಳನ್ನು ಒಂದೇ ವೇದಿಕೆಯಲ್ಲಿ ತರಲಾಗುವುದು
- ಸಂಲಗ್ನಿತ (affiliated) ಅಂಗಸಂಸ್ಥೆಗಳು ಮತ್ತು ಸ್ವಾಯತ್ತ (autonomous) ಕಾಲೇಜುಗಳ ಶ್ರೇಣೀಕೃತ ಸಬಲೀಕರಣ ಪ್ರಕ್ರಿಯೆಗೆ ಚಾಲನೆ ನೀಡುವುದು.