ಹುಮನಾಬಾದ್: ಅಂಧ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸುತ್ತಿರುವ ಮಾಣಿಕಪ್ರಭು ಶಿಕ್ಷಣ ಸಂಸ್ಥೆ ಇದೀಗ ಅಂಧ ಮಕ್ಕಳ ರಾಷ್ಟ್ರೀಯ ಚೆಸ್(ಚದುರಂಗ) ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಮಾಣಿಕನಗರದ ಮಾಣಿಕ್ಯ ಸೌಧದಲ್ಲಿ ಶ್ರೀ ಮಾಣಿಕಪ್ರಭು ಶಿಕ್ಷಣ ಸಮಿತಿ ಸಂಚಾಲಿತ ಮಾಣಿಕಪ್ರಭು ಅಂಧ ಮಕ್ಕಳ ವಸತಿಯುತ ಪಾಠಶಾಲೆ ರಜತೋತ್ಸವ ನಿಮಿತ್ತ ಆಲ್ ಇಂಡಿಯಾ ಚೆಸ್ ಫೆಡರೇಷನ್ ಆಫ್ ದಿ ಬ್ಲೈಂಡ್ ಸಹಯೋಗದಡಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಅಂಧರ ಚದುರಂಗ ಸ್ಪರ್ಧೆಗೆ ಶುಕ್ರವಾರ ಚಾಲನೆ ನೀಡಿದ ಅವರು, ಮಾಣಿಕಪ್ರಭುಗಳನ್ನು ಭಕ್ತಿಯಿಂದ ನಮಿಸಿದವರಿಗೆ ಫಲ ನಿಶ್ಚಿತ. ಅಂಧ ಮಕ್ಕಳಿಗಾಗಿ ಸಂಸ್ಥೆ ಮಾಡುತ್ತಿರುವ ಸೇವೆ ನಿಜಕ್ಕೂ ಮಾದರಿ. ಸ್ಪರ್ಧೆಯಲ್ಲಿ ಪಾಲ್ಗೊಂಡ ಅಂಧ ಮಕ್ಕಳಿಗೆ ಶುಭವಾಗಲಿ ಎಂದು ಹಾರೈಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್ ಮಾತನಾಡಿ, ದೃಷ್ಟಿಚೇತನರು ಯಾರಿಗೂ ಕಮ್ಮಿ ಇಲ್ಲ. ಮಾಣಿಕಪ್ರಭು ಸಂಸ್ಥೆ ನಿರಂತರ ಹೊಸ ಹೊಸ ಕಾರ್ಯಕ್ರಮವನ್ನು ವಿಕಲಾಂಗರಿಗಾಗಿ ಮಾಡುತ್ತಿರುವುದು ಸಂತಸ ಮೂಡಿಸಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸಂಸ್ಥಾನದ ಶ್ರೀ ಆನಂದರಾಜ ಪ್ರಭು ಮಾತನಾಡಿದರು. ಕುಪೇಂದ್ರ ಪ್ರಾಸ್ತಾವಿಕ ಮಾತನಾಡಿ, ಕರ್ನಾಟಕದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಅಂಧರು ಸೇರಿ ಆಡುತ್ತಿರುವ ಚದುರಂಗ ಸ್ಪರ್ಧೆ ಇದಾಗಿದೆ. ಸುಮಾರು ೧೬ ರಾಜ್ಯಗಳ ಮಕ್ಕಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸ್ಪರ್ಧೆ ನಿರ್ಣಾಯಕ ಮಂಜುನಾಥ ಶಿವಮೊಗ್ಗ, ಪಿಎಸ್ಐ ಬಸವರಾಜ, ಸಿದ್ರಾಮಪ್ಪ ವಾಘಮೊರೆ, ಮಾಣಿಕ ತಿಪ್ಪಣ್ಣ ನಿಮ್ಮಾನೆ, ಮಾಣಿಕಪ್ರಭು ಶಿಕ್ಷಣ ಸಮಿತಿ ವ್ಯವಸಾಪಕ ಪ್ರಭು ಪಾಂಚಾಳ ಇತರರಿದ್ದರು.