ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧಿತ ವಿಚಾರಣೆಯನ್ನು ದೆಹಲಿಯ ವಿಶೇಷ ನ್ಯಾಯಾಲಯ ಮುಂದೂಡಿದೆ. ವಿಶೇಷವೆಂದರೆ ವಿಚಾರಣೆ ಮುಂದೂಡುವಂತೆ ವಾದಿ-ಪ್ರತಿವಾದಿಗಳಿಬ್ಬರೂ ಮನವಿ ಮಾಡಿಕೊಂಡಿದ್ದರು.
ದೂರುದಾರರಾಗಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರ ಹೇಳಿಕೆ ಮರು ಪರಿಶೀಲನೆ ಸಂಬಂಧ ಶುಕ್ರವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಿತ್ತು. ಆದರೆ ಉಭಯಪಕ್ಷದವರು ಜಂಟಿಯಾಗಿ ಮನವಿ ಮಾಡಿಕೊಂಡಿದ್ದರಿಂದ ವಿಚಾರಣೆಯನ್ನು ನ. 20ಕ್ಕೆ ಮುಂದೂಡಲಾಗಿದೆ. ಅಂದಹಾಗೆ ಈ ವಿಚಾರಣೆ ಮುಂದೂಡಿಕೆಗೆ ಕಾರಣವಾಗಿದ್ದು ಕರೊನಾ. ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಖುದ್ದು ಹಾಜರಾಗಲು ಕಷ್ಟ ಎಂದು ವಾದಿ-ಪ್ರತಿವಾದಿಗಳಿಬ್ಬರೂ ಕೋರಿಕೊಂಡಿದ್ದರು.
ಕರೊನಾ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ. ಹಾಗಾಗಿ ಪ್ರಕರಣದ ಇತ್ಯರ್ಥ ಹಿನ್ನೆಲೆಯಲ್ಲಿ ಮುಂದುವರಿಯುವ ಸಲುವಾಗಿ ಎರಡೂ ಪಕ್ಷದವರೂ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಇದು ಫಾಸ್ಟ್ ಟ್ರ್ಯಾಕ್ ಕೋರ್ಟ್ ಆಗಿರುವುದರಿಂದ ವಿಳಂಬ ಮಾಡಲು ಸಾಧ್ಯವಿಲ್ಲ ಎಂದು ಅಡಿಷನಲ್ ಚೀಫ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶಾಲ್ ಪಹುಜ ಎರಡೂ ಪಕ್ಷದವರಿಗೆ ಸೂಚಿಸಿದ್ದಾರೆ. (ಏಜೆನ್ಸೀಸ್)