ಕೊಡೇಕಲ್: ಗ್ರಾಮೀಣ ಭಾಗದ ಕ್ರೀಡಾಪಟುಗಳ ಬೆಳವಣಿಗೆಗಾಗಿ ನಾನು ಸದಾ ಅವರ ಬೆನ್ನೆಲುಬಾಗಿ ಶ್ರಮಿಸುತ್ತೇನೆ ಎಂದು ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ಡಿಸೆಂಬರ್ನಲ್ಲಿ ಆಚರಿಸುವ ಮಾಜಿ ಸಚಿವ ನರಸಿಂಹ ನಾಯಕ ಮತ್ತು ಅವರ ಸಹೋದರ ಹನುಮಂತ ನಾಯಕ ಅವರ ಜನ್ಮದಿನ ನಿಮಿತ್ತ ನಾರಾಯಣಪುರದ ರಾಜುಗೌಡ ಅಭಿಮಾನಿ ಸಂಘದಿಂದ ಎಎನ್ಸಿಸಿ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡ ಆರ್ಟಿಜೆ ಚಾಲೆಂಜರ್ಸ್ ಟ್ರೋಫಿ ಸೀಸನ್-೨೨ರ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಿಂದ ಮಾನಸಿಕ ನೆಮ್ಮದಿ ಮತ್ತು ದೈಹಿಕವಾಗಿ ಸದೃಢರಾಗಲು ಸಾಧ್ಯ. ಈ ನಿಟ್ಟಿನಲ್ಲಿ ನನ್ನ ಅಧಿಕಾರವಧಿಯಲ್ಲಿ ತಾಲೂಕಿನಲ್ಲಿ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ನಿರ್ಮಿಸಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದು, ಮುಂದೆಯೂ ಕೂಡ ಕ್ರೀಡಾಪಟುಗಳಿಗೆ ಬೆನ್ನೆಲುಬಾಗಿ ನಿಲ್ಲುವೆ ಎಂದರು.
ಪ್ರತಿಭೆಗಳ ಕ್ರೀಡಾ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸುತ್ತಿರುವ ಆರ್ಟಿಜೆ ಚಾಲೆಂಜರ್ಸ್ ಕ್ರಿಕೆಟ್ ಪಂದ್ಯಾವಳಿ ಕಲ್ಯಾಣ ಕರ್ನಾಟಕದಲ್ಲಿ ತನ್ನ ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮಾಜಿ ಸಚಿವ ನರಸಿಂಹ ನಾಯಕ ಹೇಳಿದರು.
ಕ್ರೀಡೆಗಳಲ್ಲಿ ಸೋಲು -ಗೆಲುವು ಮುಖ್ಯವಲ್ಲ. ಕ್ರೀಡಾಸಕ್ತಿಬೆಳೆಸಿಕೊಂಡು ಕ್ರೀಡಾ ಮನೊಭಾವನೆಯಿಂದ ಪಾಲ್ಗೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಮುತ್ತು ಕಬಡರ, ಆರ್ಟಿಜೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹನುಮಂತ ನಾಯಕ, ಡಾ.ಬಸನಗೌಡ ಅಳ್ಳಿಕೋಟಿ, ತಿಪ್ಪಣ್ಣ ರೋಡಲಬಂಡಾ, ಚಿನ್ನಪ್ಪ ಡೊಳ್ಳಿ, ಚಂದಪ್ಪ ದೇಸಾಯಿ, ಅಶೋಕ ಮುತ್ತು, ಸಂಗಣ್ಣ ತಾಳಿಕೋಟಿ, ಎಚ್.ಬಿ.ಸುರಪುರ, ಬಸೀರ್ ಅಹ್ಮದ್, ಸಂಗನಬಸ್ಸು ಚಟ್ಟೇರ, ಅಂದಾನಪ್ಪ ಚಿನಿವಾಲರ, ಮಲ್ಲಣ್ಣ ಶೃಂಗೇರಿ, ಮಲ್ಲು ದಂಡಿನ್, ಕೃಷ್ಣಾರೆಡ್ಡಿ ಮೂದನೂರ, ಶೇಖ್ ಅಹ್ಮದ್, ಖಲಿಮ್ ಪಾಷಾ, ನರಸಪ್ಪ ದೇಗಲಮಡ್ಡಿ, ಮಹೇಶ, ಶಿವಪ್ಪ ಬಿರಾದಾರ, ಆಂಜನೇಯ ದೋರಿ, ಆರ್.ಸಿ.ಗೌಡರ್ ಇತರರಿದ್ದರು. ರಮೇಶ ಕೋಳೂರ ನೀರೂಪಣೆ ಮಾಡಿ ವಂದಿಸಿದರು.
ಭಾನುವಾರ ಆರಂಭಗೊಂಡ ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಮೈದಾನಕ್ಕೆ ತೆರಳಿ ಪ್ರದರ್ಶನ ಪಂದ್ಯದಲ್ಲಿ ರಾಜುಗೌಡ ಮತ್ತು ಸಹೋದರ ಬಬಲುಗೌಡ ನಾರಾಯಣಪುರ ಮತ್ತು ಲಿಂಗಸೂಗುರ ತಂಡಗಳ ಪರ ಆಟವಾಡುವ ಮೂಲಕ ಗಮನ ಸೆಳೆದರು.