ಕೊಡೇಕಲ್: ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ನಾರಾಯಣಪುರ ಕೆಬಿಜೆಎನ್ಎಲ್ ಮುಖ್ಯ ಇಂಜನಿಯರ್ ವಲಯ ಕಚೇರಿ ಮುಂದೆ ಸೋಮವಾರ ಧರಣಿ ನಡೆಸಿ ಅಧೀಕ್ಷಕ ಅಭಿಯಂತರ ರಮೇಶ ಪವಾರ್ ಅವರಿಗೆ ಮನವಿ ಸಲ್ಲಿಸಿದರು.
ಮಹರ್ಷಿ ವಾಲ್ಮೀಕಿ ವೃತ್ತದಿಂದ ಸಿಇ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸುರಪುರ ತಾಲೂಕು ಅಧ್ಯಕ್ಷ ಹಣಮಂತರಾಯ ಚಂದ್ಲಾಪುರ ಮಾತನಾಡಿ, ಮಳೆಯ ಕೊರೆತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಕಾಲುವೆಗೆ ನೀರನ್ನು ೧೦ ದಿನ ಬಂದ್ ೧೪ ದಿನ ಚಾಲು ಮಾಡುವ ಪದ್ಧತಿ ಅನುಸರಿಸಲಾಗುತ್ತಿದೆ. ಅದರ ಬದಲು ೭ ದಿನ ಬಂದ್ ೧೪ದಿನ ಚಾಲು ಪದ್ಧತಿ ಅನುಸರಿಸಬೇಕು ಮತ್ತು ಕಾಲುವೆ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪುವ ಬಗ್ಗೆ ಅಧಿಕಾರಿಗಳು ಕಾಲುವೆ ಕೊನೆ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಯಾದಗಿರಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಸಂಪೂರ್ಣ ಬರ ಎಂದು ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಹನುಮಗೌಡ ನಾರಾಯಣಪುರ ಮಾತನಾಡಿ, ಜಮೀನು ಕಳೆದುಕೊಂಡ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಮುಖಂಡರಾದ ತಿಪ್ಪಣ್ಣ ಜಂಪಾ, ಸಾಹೇಬಗೌಡ ಮದಲಿಂಗನಾಳ, ಹನುಮಗೌಡ, ಗದ್ದೆಪ್ಪ ನಾಗಬೇನಾಳ, ನಿಂಗನಗೌಡ, ಭೀಮಣ್ಣ, ಅವಿನಾಶ ನಾಯಕ, ಲಲಿತಾ ದೇವತ್ಕಲ್, ಬಾಗಪ್ಪ, ಕೃಷ್ಣಾಜಿ, ಹುಸೇನ್, ಮಹಿಬೂಬಸಾಬ್, ವಿವಿಧ ಗ್ರಾಮ ಘಟಕಗಳ ಪದಾಧಿಕಾರಿಗಳು, ರೈತರು, ರೈತ ಮಹಿಳೆಯರು ಇದ್ದರು.
ಸ್ಥಳೀಯ ಠಾಣೆ ಪಿಎಸ್ಐ ಇಂದುಮತಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.