ಕೊಲ್ಕತ : ನಾರದ ಲಂಚ ಪ್ರಕರಣದಲ್ಲಿ ಆರೋಪಿಗಳಾಗಿರುವ ನಾಲ್ವರು ಟಿಎಂಸಿ ಮುಖಂಡರಿಗೆ ಕೊಲ್ಕತಾ ಹೈಕೋರ್ಟ್ ಇಂದು ಜಾಮೀನು ನೀಡಿದೆ. ಪಶ್ಚಿಮ ಬಂಗಾಳದ ಸಚಿವರಾದ ಫಿರ್ಹಾದ್ ಹಕೀಂ ಮತ್ತು ಸುಬ್ರತ ಮುಖರ್ಜಿ, ಶಾಸಕ ಮದನ್ ಮಿತ್ರ ಮತ್ತು ಕಾರ್ಯಕರ್ತ ಸೊವನ್ ಚಟರ್ಜಿ ಅವರಿಗೆ ಮಧ್ಯಂತರ ಜಾಮೀನು ಲಭಿಸಿದೆ.
ಇಬ್ಬರು ಶ್ಯೂರಿಟಿಗಳೊಂದಿಗೆ 2 ಲಕ್ಷ ರೂ,ಗಳ ವೈಯಕ್ತಿಕ ಬಾಂಡ್ ನೀಡುವ ಷರತ್ತಿನ ಮೇಲೆ ಈ ಜಾಮೀನು ನೀಡಲಾಗಿದ್ದು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅವರು ಪ್ರಕರಣದ ತನಿಖೆಯಲ್ಲಿ ಭಾಗವಹಿಸಬೇಕು ಎಂದು ಕೋರ್ಟ್ ಹೇಳಿದೆ. ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಈ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಸಂದರ್ಶನಗಳನ್ನು ನೀಡಬಾರದು ಎಂದೂ ಕೋರ್ಟ್ ತಾಕೀತು ಮಾಡಿದೆ.
ಇದನ್ನೂ ಓದಿ: ನಾರದ ಲಂಚ ಪ್ರಕರಣ : ಟಿಎಂಸಿ ನಾಯಕರಿಗೆ ಗೃಹಬಂಧನ
2014 ರಲ್ಲಿ ನಡೆದ ಸ್ಟಿಂಗ್ ಆಪರೇಷನ್ನಲ್ಲಿ ಪತ್ರಕರ್ತರೊಬ್ಬರು ಬಿಸಿನೆಸ್ಮನ್ ರೀತಿಯಲ್ಲಿ ಬಂಗಾಳದಲ್ಲಿ ಹೂಡಿಕೆ ಮಾಡುವುದಾಗಿ ಹೋಗಿ 7 ಟಿಎಂಸಿ ಸಂಸದರು, 4 ಸಚಿವರು, ಒಬ್ಬ ಶಾಸಕ ಮತ್ತು ಒಬ್ಬ ಪೊಲೀಸ್ ಅಧಿಕಾರಿಗೆ ಲಂಚ ನೀಡಿದ್ದರು. ಈ ಟೇಪ್ಗಳನ್ನು 2016 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಇದೇ ಮೇ 17 ರಂದು ನಾಲ್ವರು ಟಿಎಂಸಿ ನಾಯಕರನ್ನು ಬಂಧಿಸಿತ್ತು. ಮೇ 21 ರಿಂದ ಈ ನಾಯಕರು ಗೃಹಬಂಧನದಲ್ಲಿದ್ದರು. ಇದೀಗ ಮಧ್ಯಂತರ ಜಾಮೀನು ಲಭಿಸಿದೆ. (ಏಜೆನ್ಸೀಸ್)
ಕೋವಿಡ್ ಹೆಚ್ಚಿರುವ ಜಿಲ್ಲೆಗಳಿಗೆ ಸಿಎಂ ಭೇಟಿ; ಇಂದು ತುಮಕೂರಿಗೆ ಬಿಎಸ್ವೈ