More

    ಶರಣರ ವಚನಗಳು ಬದುಕಿನಲ್ಲಿ ಅಡಕವಾಗಲಿ

    ನಂಜನಗೂಡು: ಬಸವಾದಿ ಶರಣರ ಅನುಭಾವದ ವಚನಗಳನ್ನು ಬಾಯಿ ಮಾತಿಗೆ ಸೀಮಿತಗೊಳಿಸದೆ, ನಮ್ಮ ಬದುಕಿನಲ್ಲಿ ಆಚರಣೆಗೆ ತಂದು ಪರಿಪಾಲಿಸಿದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸಹಾಯಕ ಕಾರ್ಮಿಕ ಆಯುಕ್ತೆ ನಾಜೀಯಾ ಸುಲ್ತಾನ ಹೇಳಿದರು.

    ನಗರದ ದೇವೀರಮ್ಮನಹಳ್ಳಿ ಶರಣ ಸಂಗಮ ಮಠದ ಆವರಣದಲ್ಲಿ ಪ್ರತಿಧ್ವನಿ ವೇದಿಕೆ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ ನಮ್ಮೂರ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದಲ್ಲಿ ಮಾನವೀಯ ಮೌಲ್ಯ, ತತ್ವಾದರ್ಶಗಳ ತಮ್ಮ ಅನುಭಾವದ ಬುತ್ತಿಯನ್ನು ವಚನಗಳ ಮೂಲಕ ಬಸವಾದಿ ಶರಣರು ನಾಡಿಗೆ ಕೊಟ್ಟು ಹೋಗಿದ್ದಾರೆ. ಆದರೆ ಅವರ ವಚನಗಳನ್ನು ನಾವು ಹೇಳುವುದಕ್ಕಷ್ಟೇ ಸೀಮಿತಗೊಳಿಸಿದ್ದೇವೆ. ಅದನ್ನು ಪರಿಪಾಲಿಸುವಲ್ಲಿ ಎಡವಿದ್ದೇವೆ. ಜಾತಿ, ಧರ್ಮ ಮೀರಿದ ಮೌಲ್ಯಗಳನ್ನು ಸಾರುವ ಶರಣರ ವಚನಗಳು ನಮ್ಮ ಬದುಕಿನಲ್ಲಿ ಅಡಕವಾಗಬೇಕು. ಮಕ್ಕಳಿಗೆ ವಚನ ಸಾಹಿತ್ಯದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕೆಲಸವನ್ನು ಪ್ರತಿಯೊಬ್ಬ ಪಾಲಕರು ಮಾಡಬೇಕು. ಆಗ ಮಾತ್ರ ದ್ವೇಷ, ಅಸೂಹೆ, ತಾರತಮ್ಯ ಹೋಗಲಾಡಿಸಿ ಮೌಲ್ಯಗಳನ್ನು ಬಿತ್ತಲು ಸಾಧ್ಯ ಎಂದರು.

    ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ನಾಡು, ನುಡಿ ವಿಚಾರವಾಗಿ ನಮ್ಮಲ್ಲಿರುವ ಒಗ್ಗಟ್ಟು ಸದಾ ಜಾಗೃತವಾಗಿರಬೇಕು. ಜಾಗತಿಕವಾಗಿ ನಮ್ಮ ನಾಡಿನ ಕಲೆ, ಸಂಸ್ಕೃತಿಗೆ ಅಪಾರ ಜನಮನ್ನಣೆಯಿದೆ. ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಕಲಿಸುವ ಕೆಲಸ ಆಗಾಗ್ಗೆ ಆಗಬೇಕು ಎಂದು ಆಶಿಸಿದರು.

    ಗುಂಡ್ಲುಪೇಟೆ ಶಾಸಕ ಗಣೇಶ್‌ಪ್ರಸಾದ್ ಮಾತನಾಡಿ, ನಿರುದ್ಯೋಗ ಸಮಸ್ಯೆ ನಿವಾರಿಸಲು ಕೈಗಾರಿಕೆಗಳು ಹೆಚ್ಚಾಗಬೇಕೆಂಬುದು ಎಲ್ಲರ ಆಶಯ. ಆದರೆ ಕೈಗಾರಿಕೆಗಳಿಗೆ ಸ್ಥಳೀಯರಿಗಿಂತ ಹೆಚ್ಚಾಗಿ ಹೊರ ದೇಶ ಹಾಗೂ ಹೊರ ರಾಜ್ಯದವರೇ ಹೂಡಿಕೆ ಮಾಡುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದೆ ಹೊರಗಿನವರಿಗೆ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ ಅಂತಹವರಿಗೆ ರೈತರ ಭೂಮಿ ಕೊಟ್ಟು ಏನೂ ಪ್ರಯೋಜನವಾಗುವುದಿಲ್ಲ. ಖಾಸಗಿ ವಲಯದಲ್ಲೂ ಸ್ಥಳೀಯರಿಗೆ ಉದ್ಯೋಗ ಮೀಸಲು ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.

    ತಿಧ್ವನಿ ವೇದಿಕೆ ತಾಲೂಕು ಅಧ್ಯಕ್ಷ ತ್ರಿನೇಶ್ ಮಾತನಾಡಿ, ನಂಜನಗೂಡಿನ ಎಲ್ಲ ಕೈಗಾರಿಕಾ ಪ್ರದೇಶಗಳಲ್ಲಿರುವ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡದೆ ವಂಚಿಸುತ್ತಿರುವುದು ಬಹಳ ನೋವಿನ ಸಂಗತಿ. ಆಯಕಟ್ಟಿನ ಹುದ್ದೆಗಳನ್ನು ಹೊರ ರಾಜ್ಯದವರಿಗೆ ಮೀಸಲುಗೊಳಿಸಿ ಸಾಮಾನ್ಯ ಕೆಲಸಗಳಿಗೆ ಮಾತ್ರ ಸ್ಥಳೀಯರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕೈಗಾರಿಕೆಗಳು ಕನ್ನಡಿಗರನ್ನು ತುಚ್ಛವಾಗಿ ಕಾಣುತ್ತಿವೆ. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಗಮನಹರಿಸಬೇಕು ಎಂದರು.

    ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಬಸವಕೇಂದ್ರದ ಬಸವಯೋಗಿ ಪ್ರಭುಗಳು, ಶರಣ ಸಂಗಮ ಮಠದ ಶ್ರೀ ನಾಗರಾಜೇಂದ್ರ ಸ್ವಾಮೀಜಿ, ಜಾಮೀಯ ಮಸೀದಿಯ ಅಬ್ದುಲ್ ಮುಸಾಫಿರ್ ರಷಾದಿ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಬಿಜೆಪಿ ಮುಖಂಡ ಎಸ್.ಮಹದೇವಯ್ಯ, ಪ್ರತಿಧ್ವನಿ ವೇದಿಕೆ ಅಧ್ಯಕ್ಷ ಪ್ರಸಾದ್, ಪಟ್ಟಣ ಅಧ್ಯಕ್ಷ ಆನಂದ್, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಜಿಪಂ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯ್ಕ, ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಪ್ರದೀಪ್‌ಕುಮಾರ್ ಉಪಸ್ಥಿತರಿದ್ದರು.

    ಕನ್ನಡ ಧ್ವನಿ ಪ್ರಶಸ್ತಿ ಪ್ರದಾನ
    ವಿವಿಧ ಕ್ಷೇತ್ರಗಳ ಸಾಧಕರಾದ ಹಿರಿಯ ಪತ್ರಕರ್ತ ನಂಜನಗೂಡು ಮಧು, ಟಿ.ಆರ್.ವಿದ್ಯಾಸಾಗರ್, ಶಂಕರ್‌ಪ್ರಸಾದ್, ಗೋಳೂರು ನಾರಾಯಣಸ್ವಾಮಿ, ಚೇತನ್, ಡಾ.ಹರಿಪ್ರಸಾದ್, ಪೈಲ್ವಾನ್ ಸಿದ್ದರಾಜು, ಮುನೀರ್, ಗೀತಾ, ಮಣಿಕಂಠ, ಹಲ್ಲರೆ ಶಿವಬುದ್ಧಿ, ಮಹೇಂದ್ರ, ಮಹೇಶ್, ಕಲ್ಮಳ್ಳಿ ನಟರಾಜು, ಹುಸ್ಕೂರು ರಾಜಶೇಖರ್, ವಸಂತ ಚನ್ನಪ್ಪ, ಸೌಮ್ಯಾ ಸಿದ್ದರಾಜು, ಕೆ.ನಂಜುಂಡಯ್ಯ, ಉಲ್ಲಾಸ್ ಅವರಿಗೆ ಕನ್ನಡ ಧ್ವನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts