ರಾಮ ಕಿಶನ್ ಕೆ.ವಿ.
ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸಂಭವಿಸುವ ಆಕಸ್ಮಿಕ ಅಪಘಾತ ಹಾಗೂ ರೈಲ್ವೆ ಹಳಿಗಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳನ್ನು ತಡೆಯಲು ‘ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ’ (ಬಿಎಂಆರ್ಸಿಎಲ್) ಇದೇ ಮೊದಲ ಬಾರಿಗೆ ಸ್ವಯಂಚಾಲಿತ ಪ್ರವೇಶ ದ್ವಾರ (ಸ್ಕ್ರೀನ್ ಡೋರ್) ಸ್ಥಾಪಿಸಲು ಮುಂದಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿಯ ಕೋನಪ್ಪನ ಅಗ್ರಹಾರ ನಿಲ್ದಾಣದ ಅಂಕಣಗಳಲ್ಲಿ ನೂತನ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ.
ಈಗಾಗಲೆ ಮುಂಬೈ ಹಾಗೂ ಚೆನ್ನೆ$ನ ಮೆಟ್ರೋ ನಿಲ್ದಾಣಗಳಲ್ಲಿ ಈ ಬಗೆಯ ಸ್ಕ್ರೀನ್ ಡೋರ್ ಅಳವಡಿಸಲಾಗಿದೆ. ಹೊಸ ವಿಧಾನದಿಂದಾಗಿ ಜನದಟ್ಟಣೆ ಹೆಚ್ಚಿರುವ ಮೆಟ್ರೋ ನಿಲ್ದಾಣಗಳಲ್ಲಿ ಸಂಭವಿಸುವ ಅವಡಗಳಿಗೆ ತಡೆ ನೀಡುವುದರ ಜತೆಗೆ ಪ್ರಯಾಣಿಕರಿಗೆ ಪೂರ್ಣಪ್ರಮಾಣದ ಸುರಕ್ಷತಾ ಭಾವವನ್ನು ಒದಗಿಸಿದಂತಾಗುತ್ತದೆ.
ಇನ್ಫೋಸಿಸ್ ಪ್ರತಿಷ್ಠಾನದ ಧನಸಹಾಯದಿಂದ (135 ಕೋಟಿ ರೂ.) ನಿರ್ಮಾಣವಾಗುತ್ತಿರುವ ಎಲೆಕ್ಟ್ರಾನಿಕ್ಸ್ ಸಿಟಿ ನಿಲ್ದಾಣವು ಆರ್.ವಿ. ರಸ್ತೆ& ಬೊಮ್ಮಸಂದ್ರ ಮಧ್ಯೆ ಹಳದಿ ಮಾರ್ಗದ ಭಾಗವಾಗಿರಲಿದೆ. ಇಂಥದ್ದೊಂದು ವಿನೂತನ ವ್ಯವಸ್ಥೆಯನ್ನು ಜಾರಿಗೆ ತರಲು ಬಿಎಂಆರ್ಸಿಎಲ್ ಎರಡು ವರ್ಷಗಳಿಂದ ಸಿದ್ಧತೆ ನಡೆಸಿತ್ತು.
ಪ್ರಯಾಣಿಕರು ನಿಲ್ದಾಣದ ಫ್ಲಾಟ್ಫಾರ್ಮ್ಗಳಲ್ಲಿ ಸಾಲಾಗಿ ನಿಂತಿರುವುದನ್ನು ನೀವು ನೋಡಿರುತ್ತೀರಿ. ಹೀಗೆ ನಿಂತವರು ಕುತೂಹಲಕ್ಕೋ, ಉದ್ದೇಶಪೂರ್ವಕವಾಗಿಯೋ ಹಳಿಯತ್ತ ಇಣುಕಿ ನೋಡುತ್ತಾರೆ. ಆ ಸ್ಥಳದಲ್ಲಿ ಮಕ್ಕಳನ್ನು ನಿಯಂತ್ರಿಸುವುದು ತ್ರಾಸದಾಯಕ. ಇಂಥವರಿಗೆ ಎಚ್ಚರಿಕೆ ನೀಡಲು ಭದ್ರತಾ ಸಿಬ್ಬಂದಿ ಸದಾ ಹೆಣಗಾಡುತ್ತಿರುತ್ತಾರೆ. ಹೀಗಿದ್ದರೂ ಕೆಲ ಮಂದಿ ಬೇಜವಾಬ್ದಾರಿಯ ವರ್ತನೆ ತೋರುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಸ್ಕ್ರೀನ್ ಡೋರ್ ಅಳವಡಿಕೆ ಬಗ್ಗೆ ಇನ್ಫೋಸಿಸ್ ಫೌಂಡೇಷನ್ ಪ್ರಸ್ತಾವನೆ ಸಲ್ಲಿಸಿತ್ತು. ಇದರ ಭಾಗವಾಗಿ ಹೆಚ್ಚುವರಿ ವೆಚ್ಚವನ್ನು ಭರಿಸಲು ಸಂಸ್ಥೆಯು ಒಪ್ಪಿಕೊಂಡಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವ್ಯವಸ್ಥೆ ಅನುಷ್ಠಾನಗೊಂಡ ಬಳಿಕ ರೈಲು ಬರುವವರೆಗೆ ‘ಸ್ಕ್ರೀನ್ ಡೋರ್’ ಮುಚ್ಚಿಕೊಂಡಿರುತ್ತದೆ. ಆ ವೇಳೆ ಯಾರೂ ಹಳಿಯತ್ತ ಸಾಗಲು ಸಾಧ್ಯವಿಲ್ಲ. ರೈಲು ಆಗಮನವಾದಾಗ ಸ್ಕ್ರೀನ್ ಡೋರ್ ತಂತಾನೆ ತೆರೆದುಕೊಳ್ಳುತ್ತದೆ. ಪ್ರಯಾಣಿಕರು ಒಳಪ್ರವೇಶಿಸಿ, ರೈಲು ತೆರಳಿದ ಬಳಿಕ ಸ್ಕ್ರೀನ್ ಡೋರ್ ಮತ್ತೆ ಮುಚ್ಚಿಕೊಳ್ಳುತ್ತದೆ.
ಇನ್ಫೋಸಿಸ್ಗೆ ಎಂಟ್ರಿ
ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ವರ್ಷಾಂತ್ಯದಲ್ಲಿ ಆರಂಭಗೊಳ್ಳಲಿದ್ದು, ಇಲ್ಲಿನ ವಾಕ್ ವೇ ಮೂಲಕ ಇನ್ಫೋಸಿಸ್ ಕ್ಯಾಂಪಸ್ ಅನ್ನು ಪ್ರವೇಶಿಸಬಹುದು.
ಆತ್ಮಹತ್ಯೆಯ ಸ್ಪಾಟ್!
ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ನಮ್ಮ ಮೆಟ್ರೋ ರೈಲು ನಿಲ್ದಾಣಗಳ ಪ್ಲಾಟ್ಫಾಮ್ರ್ಗಳು ಕೃತ್ಯಕ್ಕೆ ಆಹ್ವಾನ ನೀಡುವಂತಿವೆ. 2012ರ ಮಾರ್ಚ್ನಲ್ಲಿ ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಸೇಂಟ್ ಜೋಸೆಫ್ ಪಿಯು ಕಾಲೇಜಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ. 2019ರ ಜನವರಿಯಲ್ಲಿ ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ ಸ್ವಲ್ಪದರಲ್ಲೇ ಪಾರಾಗಿದ್ದ. ರೈಲು ಬರುವಾಗ ಸೆಲ್ಫಿ& ರೀಲ್ಸ್ ಹುಚ್ಚು ಸಹ ಅನಾಹುತಗಳಿಗೆ ಎಡೆಮಾಡಿಕೊಡುತ್ತಿದೆ.
ಭದ್ರತಾ ಸಿಬ್ಬಂದಿಗೆ ರಿಲೀಫ್
ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್), ಯಶವಂತಪುರ, ಮಹಾತ್ಮ ಗಾಂಧಿ ರಸ್ತೆ, ಮಲ್ಲೇಶ್ವರ, ಕಬ್ಬನ್ ಉದ್ಯಾನವನ, ಬನಶಂಕರಿ ಮುಂತಾದ ಮೆಟ್ರೋ ನಿಲ್ದಾಣಗಳಲ್ಲಿ ಸದಾ ಜನದಟ್ಟಣೆ ಕಾಣಿಸುತ್ತದೆ. ಧಾವಂತದ ಮನಸ್ಥಿತಿಯಲ್ಲಿರುವ ಪ್ರಯಾಣಿಕರು ಸುರಕ್ಷತಾ ನಿಯಮಗಳತ್ತ ಗಮನಹರಿಸದೆ ಇದ್ದಾಗ ಆಕಸ್ಮಿಕ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಮೊಬೈಲ್ ಹಾವಳಿಯೂ ಅನಿರೀಕ್ಷಿತ ದುರಂತಗಳಿಗೆ ಕಾರಣವಾಗಬಲ್ಲದು. ಹೀಗಿರುವಾಗ ಸ್ಕ್ರೀನ್ಡೋರ್ ವ್ಯವಸ್ಥೆಯು ಭದ್ರತಾ ಸಿಬ್ಬಂದಿಗೆ ದೊಡ್ಡ ರಿಲೀಫ್ ನೀಡಲಿದೆ. ಈ ವ್ಯವಸ್ಥೆ ನಗರದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲೂ ಅನುಷ್ಠಾನಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಬೇರೆ ನಿಲ್ದಾಣಗಳಲ್ಲೂ ಅಳವಡಿಕೆ
ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಐದು ವರ್ಷದ ನಿರ್ವಹಣೆ ಸೇರಿ ಸಿಗ್ನಲಿಂಗ್, ನಿಯಂತ್ರಣ, ಕಂಟ್ರೋಲಿಂಗ್ ಮತ್ತು ಫ್ಲಾಟ್ಫಾರ್ಮ್ನಲ್ಲಿ ಸ್ಕ್ರೀನ್ ಡೋರ್ ವಿನ್ಯಾಸ ನಿರ್ಮಾಣಕ್ಕಾಗಿ ಬಿಎಂಆರ್ಸಿಎಲ್ ಟೆಂಡರ್ ಆಹ್ವಾನಿಸಿದೆ. ಇದನ್ನು ಹಂತ&2, 2ಎ ಮತ್ತು 2ಬಿ ಯೋಜನೆಯಲ್ಲಿ ಬರುವ ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತದೆ.