ಬೆಂಗಳೂರು: ‘ಸ’ ಚಿತ್ರದ ನಂತರ ನಟನೆ-ನಿರ್ದೇಶನದಿಂದ ದೂರವೇ ಇದ್ದ ಹೇಮಂತ್ ಹೆಗ್ಡೆ, ಕಳೆದ ವರ್ಷ ‘ನಮ್ ನಾಣಿ ಮದ್ವೆ ಪ್ರಸಂಗ’ ಎಂಬ ಚಿತ್ರವನ್ನು ಶುರು ಮಾಡಿದ್ದರು. ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಇತ್ತೀಚೆಗೆ ಒಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ ಹೇಮಂತ್.
ಇದನ್ನೂ ಓದಿ: PHOTOS | ಮಾಜಿ ಪ್ರಿಯಕರನಿಂದ ಕಿರುಕುಳ; ನೋವು ಹಂಚಿಕೊಂಡ ನಟಿ
ಹವ್ಯಕ ಭಾಷೆಯ ಈ ಹಾಡನ್ನು ಸಂಗೀತ ನಿರ್ದೇಶಕ ವಿ.ಮನೋಹರ್ ಬಿಡುಗಡೆ ಮಾಡಿದ್ದಾರೆ. ಹೇಮಂತ್ ಹೆಗ್ಡೆ ಅವರೆ ಬರೆದಿರುವ ಈ ಹಾಡಿಗೆ ರವಿ ಮುರೂರ್ ಸಂಗೀತ ಸಂಯೋಜಿಸಿದ್ದಾರೆ. ಯೂಟ್ಯೂಬ್ನ ಎ2 ಮ್ಯೂಸಿಕ್ ಚಾನಲ್ನಲ್ಲಿ ಈ ಹಾಡು ಬಿಡುಗಡೆಯಾಗಿದೆ.
‘ನಮ್ ನಾಣಿ ಮದ್ವೆ ಪ್ರಸಂಗ’ ಒಂದು ಅಪ್ಪಟ ಮನೋರಂಜನೆಯ ಚಿತ್ರವಂತೆ. ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಸಮಸ್ಯೆಯೇ ಈ ಚಿತ್ರದ ಕಥೆಯ ಒಂದು ಭಾಗವಂತೆ. ‘ಈ ಚಿತ್ರವನ್ನು ನೋಡಿದ ಪ್ರೇಕ್ಷಕ ನಗೆಗಡಲಲ್ಲಿ ತೇಲುವುದು ನಿಜ. ಅಷ್ಟು ಹಾಸ್ಯ ನಮ್ಮ ಚಿತ್ರದಲ್ಲಿದೆ. ಶಿರಸಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ಅಲ್ಲಿನ ಪ್ರಾಂತೀಯ ಭಾಷೆಯಲ್ಲೇ ಹೆಚ್ಚು ಸಂಭಾಷಣೆ ಇರುತ್ತದೆ. ನಾನು ಈ ತನಕ ಕಮರ್ಷಿಯಲ್ ಚಿತ್ರಗಳನ್ನೇ ಮಾಡಿದ್ದೆ. ಆದರೆ, ಒಂದು ಪ್ರಾಂತ್ಯವನ್ನು ಕೇಂದ್ರವಾಗಿಟ್ಟುಕೊಂಡು ಮಾಡಿರುವ ಮೊದಲ ಚಿತ್ರವಿದು’ ಎನ್ನುತ್ತಾರೆ ಹೇಮಂತ್ ಹೆಗ್ಡೆ.
ಹೇಮಂತ್ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಶೃತಿ ನಂದೀಶ್, ಶ್ರೇಯಾ ವಸಂತ್ ನಾಯಕಿಯರು. ರಾಜೇಶ್ ನಟರಂಗ, ಪದ್ಮಜಾ ರಾವ್, ಸುನೇತ್ರ ಪಂಡಿತ್, ಮಧು ಹೆಗ್ಡೆ, ರೇವಣ್ಣ ಸಿದ್ದಯ್ಯ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಹಿಂದೆ ಸರಿಯೋ ಮಾತೇ ಇಲ್ಲ… ಯಶ್ ಅಭಿಮಾನಿಗಳ ಆಕ್ರೋಶದ ಬೆಂಕಿಗೆ ತುಪ್ಪ ಸುರಿದ ವೆಂಕಟೇಶ್ ಹೇಳಿಕೆ
‘ನಮ್ ನಾಣಿ ಮದ್ವೆ ಪ್ರಸಂಗ’ ಚಿತ್ರದಲ್ಲಿ ಎರಡು ಹಾಡುಗಳಿದ್ದು, ವಿ.ಮನೋಹರ್ ಹಾಗೂ ರವಿ ಮುರೂರ್ ಸಂಗೀತ ನೀಡಿದ್ದಾರೆ. ಸಂದೀಪ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕೃಷ್ಣ ಭಂಜನ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಏಪ್ರಿಲ್ 7 ರಂದು ಚಿತ್ರ ತೆರೆಗೆ ಬರಲಿದೆ.