ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭದ್ರತಾ ಸಿಬ್ಬಂದಿಗಳು ರಸ್ತೆಗೆ ತಳ್ಳಿರುವಂತಹ ಘಟನೆ ಜಿಲ್ಲೆಯ ಕಿತ್ತೂರಿನಲ್ಲಿ ನಡೆದಿದೆ. ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ ನಂತರ ಈ ಘಟನೆ ನಡೆದಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಅವರ ಬೆಂಗಾವಲು ಪಡೆ ಬರುವಾಗ ಭದ್ರತಾ ಸಿಬ್ಬಂದಿ ಕಟೀಲ್ ಅವರನ್ನು ತಳ್ಳಾಡಿದ್ದಾರೆ.
ಘಟನೆಯಿಂದ ಸಿಡಿಮಿಡಿಕೊಂಡ ನಳಿನ್ ಕುಮಾರ್ ಕಟೀಲ್, ತಮ್ಮನ್ನು ರಸ್ತೆಗೆ ದೂಡಿದವರನ್ನು ಜೋರಾಗಿ ತಳ್ಳಿ ಸಿಟ್ಟು ತೀರಿಸಿಕೊಂಡಿದ್ದಾರೆ. ಬಳಿಕ ಸರಿಯಾದ ಸಮಯಕ್ಕೆ ತನ್ನ ವಾಹನ ಬಾರದೇ ಇದ್ದುದಕ್ಕಾಗಿ ಬೇರೆ ವಾಹನ ಏರಿದ್ದಾರೆ.
ಇದನ್ನೂ ಓದಿ: ಸಾಧು ಕೋಕಿಲ ಕೆಪಿಸಿಸಿ ಸಾಂಸ್ಕೃತಿಕ ಘಟಕದ ನೂತನ ಅಧ್ಯಕ್ಷ; ಕಾಂಗ್ರೆಸ್ಗೆ ಇನ್ನಷ್ಟು ಶಕ್ತಿ ತುಂಬುತ್ತಾರೆ ಎಂದ ಡಿಕೆಶಿ
ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಆಗಮಿಸಿ, ಚೆನ್ನಮ್ಮ ವೃತ್ತದಿಂದ ಕೋಟೆಯವರೆಗೂ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಿದ್ದರು. ರಾಜನಾಥ ಸಿಂಗ್ಗೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಸಾಥ್ ನೀಡಿದರು.
ಸಚಿವ ರಾಜನಾಥ್ ಸಿಂಗ್ ರೋಡ್ ಶೋ ಬಳಿಕ ಮಾತನಾಡುತ್ತಾ, ಸಿಎಂ ಬಸವರಾಜ ಬೊಮ್ಮಾಯಿ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ನಂ.1 ರಾಜ್ಯವಾಗಲಿದೆ. ಡಬಲ್ ಇಂಜಿನ್ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಬಿಜೆಪಿ ಇರುವಲ್ಲಿವರೆಗೆ ಜಗತ್ತಿನಲ್ಲಿ ಜನರ ಸೇವೆ ನಡೆಯಲಿದೆ. ಇಲ್ಲಿನ ಜನರ ಬೆಂಬಲ ಹಾಗೂ ಉತ್ಸಾಹ ನೋಡಿದರೆ, ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಪ್ರಧಾನಿ ಮೋದಿ ಆಡಳಿತವಿರುವ ತನಕ ಭಾರತ ದೇಶ ಜಗತ್ತಿನಲ್ಲಿ ಪ್ರಸಿದ್ಧಿ ಪಡೆಯಲಿದೆ ಎಂದರು.