ಬೆಂಗಳೂರು/ಮೈಸೂರು: ಬಹಳ ವರ್ಷಗಳಿಂದ ವಿಷ್ಣು ಅಭಿಮಾನಿಗಳು ಎದುರು ನೋಡುತ್ತಿದ್ದ ಕ್ಷಣ ಇಂದು ಬಂದಿದೆ. ಅಸಂಖ್ಯಾತ ಅಭಿಮಾನಿಗಳ ಆರಾಧ್ಯ ದೈವ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಇಂದು ಲೋಕಾರ್ಪಣೆಗೊಳ್ಳಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ.
ಮೈಸೂರು ಮತ್ತು ನಂಜನಗೂಡು ಮಾರ್ಗ ಮಧ್ಯೆ ಇರುವ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣವಾಗಿದೆ. 13 ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಭವ್ಯ ಸ್ಮಾರಕ ಉದ್ಘಾಟನೆಗೆ ಅಸಂಖ್ಯಾತ ವಿಷ್ಣು ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.
ಸ್ಮಾರಕದಲ್ಲಿ ಏನೇನಿದೆ?
ಒಟ್ಟು 5 ಎಕರೆ ಜಾಗ ಮೀಸಲು ಇಡಲಾಗಿದ್ದು, ಅದರಲ್ಲಿ 2.75 ಎಕರೆ ಜಾಗದಲ್ಲಿ 11 ಕೋಟಿ ವೆಚ್ಚದಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗಿದೆ. ಸ್ಮಾರಕದಲ್ಲಿ 7 ಅಡಿ ಎತ್ತರದ ವಿಷ್ಣು ಪ್ರತಿಮೆ, ದಾದಾ ಪುತ್ಥಳಿ, ಆಡಿಟೋರಿಯಂ, ಕರ್ಣನ ಫೋಟೋ ಗ್ಯಾಲರಿ, ಕ್ಲಾಸ್ರೂಮ್, ಕ್ಯಾಂಟಿನ್ ಏರಿಯಾ ಹಾಗೂ ಸೆಲ್ಫಿ ಸ್ಪಾಟ್ ಸೇರಿದಂತೆ ಹತ್ತು ಹಲವು ವಿಶೇಷತೆಗಳಿವೆ. ಫೋಟೋ ಗ್ಯಾಲರಿಯಲ್ಲಿ 600ಕ್ಕೂ ಹೆಚ್ಚು ಸಾಹಸಸಿಂಹನ ಫೋಟೋಗಳು ಇವೆ. ಅಲ್ಲದೆ, ವಿಷ್ಣು ಬಳಸುತ್ತಿದ್ದ ವಸ್ತುಗಳು, ಬಟ್ಟೆ ಕಾಣಿಸಲಿವೆ.
ಅಂದಹಾಗೆ 2020 ಸೆ. 15ರಂದು ಆಗಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಇದೀಗ ಸ್ಮಾರಕ ಕೆಲಸ ಸಂಪೂರ್ಣ ಪೂರ್ಣಗೊಂಡಿದ್ದು, ಇಂದು (ಜ.29) ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ. ಪ್ರವಾಸಿಗರ ಸ್ವರ್ಗ ಎನಿಸಿಕೊಂಡಿರುವ ಮೈಸೂರಿಗೆ ವಿಷ್ಣು ಸ್ಮಾರಕ ಮತ್ತೊಂದು ಆಕರ್ಷಣೆ ಆಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ.
ಸ್ಮಾರಕ ಉದ್ಘಾಟನೆ ಹಿನ್ನೆಲೆಯಲ್ಲಿ ಇಂದು ರಕ್ತದಾನ ಶಿಬಿರ, ಅನ್ನದಾನ, ಬೈಕ್ ರ್ಯಾಲಿ ಸೇರಿದಂತೆ ಅನೇಕ ಕಾರ್ಯಕ್ರಮಗಳು ಸ್ಮಾರಕದ ಬಳಿಕ ನೆರವೇರಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸ್ಮಾರಕ ಸ್ಥಳಕ್ಕೆ ಆಗಮಿಸಿದ್ದು, ನೆಚ್ಚಿನ ನಟನಿಗೆ ಜಯಘೋಷಗಳನ್ನು ಮೊಳಗಿಸುತ್ತಿದ್ದಾರೆ.
ಸ್ಮಾರಕ ಉದ್ಘಾಟನೆ ಅಂಗವಾಗಿ ವಿಷ್ಣು ಪುಣ್ಯಭೂಮಿ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸ್ಮಾರಕ ಉದ್ಘಾಟನೆ ಕನ್ನಡಿಗರ ಬಹುದಿನದ ಕನನಾಗಿದ್ದು, ಇಂದು ನನಸಾಗುತ್ತಿದೆ. 13 ವರ್ಷಗಳ ಸತತ ಹೋರಾಟಕ್ಕೆ ಇಂದು ಪ್ರತಿಫಲ ಸಿಕ್ಕಿದ್ದು, ಇದೇ ಖುಷಿಯಲ್ಲಿ ಬೆಂಗಳೂರಿಂದ ಮೈಸೂರಿನವರೆಗೆ 1000 ರಥ ಯಾತ್ರೆ ನೆರವೇರಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸುಮಾರು 1000 ವಾಹನಗಳ ರಥ ಯಾತ್ರೆ ನಡೆದಿದೆ. ಬೆಂಗಳೂರಿಂದ 1000 ಗಾಡಿಯಲ್ಲಿ ಸಾವಿರಾರು ಅಭಿಮಾನಿಗಳು ಸ್ಮಾರಕ ಉದ್ಘಾಟನೆಗೆ ಬಂದಿದ್ದಾರೆ. ಮೈಸೂರು ರಸ್ತೆಯುದ್ದಕ್ಕೂ ಕರುನಾಡು ಸುಪುತ್ರನ ಕಟೌಟ್ಗಳು ತಲೆ ಎತ್ತಿ ನಿಂತಿವೆ. 140ಕ್ಕೂ ಹೆಚ್ಚು ಕಿ.ಮೀ ವರೆಗೂ ವಿಷ್ಣು ಕಟೌಟ್ಗಳು ರಾರಾಜಿಸುತ್ತಿವೆ. (ದಿಗ್ವಿಜಯ ನ್ಯೂಸ್)
ವಿಷ್ಣು ಸ್ಮಾರಕ ಉದ್ಘಾಟನೆ: ಬೆಂಗಳೂರಿಂದ ಮೈಸೂರಿನವರೆಗೆ 1000 ರಥಯಾತ್ರೆ, ದಾರಿಯುದ್ದಕ್ಕೂ ಕಟೌಟ್ ಜಾತ್ರೆ
ಮೈಸೂರಿನಲ್ಲಿ ವಿಷ್ಣು ಸ್ಮಾರಕ ಉದ್ಘಾಟನೆ: ಸರ್ಕಾರ, ಚಲನಚಿತ್ರ ಮಂಡಳಿ ವಿರುದ್ಧ ಅಭಿಮಾನಿಗಳ ಆಕ್ರೋಶ
ಹೃದಯಾಘಾತದಿಂದ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಮಂದೀಪ್ ರಾಯ್ ವಿಧಿವಶ