ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ್ದ ಬಲರಾಮ ಆನೆಗೆ ಗುಂಡು ಹಾರಿಸಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ (ಡಿ.16) ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಜಮೀನಿಗೆ ಗುರುವಾರ ರಾತ್ರಿ ಬಲರಾಮ ಹೋಗಿದ್ದ. ಇದರಿಂದ ಸಿಟ್ಟಿಗೆದ್ದ ಜಮೀನಿನ ಮಾಲೀಕ ಸುರೇಶ್ ಎಂಬಾತ ಬಲರಾಮನಿಗೆ ಗುಂಡು ಹಾರಿಸಿದ್ದ. ಗುಂಡು ಆನೆಯ ತೊಡೆ ಬಳಿ ಹೊಕ್ಕಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ರಮೇಶ್ ಚಿಕಿತ್ಸೆ ನೀಡಿದ್ದು, ಇದೀಗ ಬಲರಾಮ ಚೇತರಿಸಿಕೊಂಡಿದ್ದಾನೆ.
ಗುಂಡು ಹೊಡೆದ ಸುರೇಶ್ನನ್ನು ವನ್ಯ ಜೀವಿ ಕಾಯ್ದೆ ಉಲ್ಲಂಘನೆ ಆರೋಪದಡಿಯಲ್ಲಿ ಬಂಧಿಸಲಾಗಿದೆ. ಆತನ ಬಳಿಯಿದ್ದ ಸಿಂಗಲ್ ಬ್ಯಾರಲ್ ಬಂದೂಕು ಹಾಗೂ ಕಾರ್ಟ್ರಿಜ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಬಲರಾಮ ಹಲವು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದಾನೆ. ಈಗ 64 ವರ್ಷ. ವಯಸ್ಸಾಗಿರುವುದರಿಂದ ಬಲರಾಮನ ಬಳಿಕ ಅಂಬಾರಿ ಹೊರುವ ಜವಾಬ್ದಾರಿಯನ್ನು ಅರ್ಜುನನಿಗೆ ಕೊಡಲಾಯಿತು. ಇದೀಗ ಅರ್ಜುನನಿಗೂ ವಯಸ್ಸಾಗಿದ್ದು, ಅಭಿಮನ್ಯು ಆ ಸ್ಥಾನವನ್ನು ತುಂಬುತ್ತಿದ್ದಾರೆ. ಇನ್ನು ಸೌಮ್ಯ ಸ್ವಭಾವದ ಬಲರಾಮ 2.70ಮೀಟರ್ ಎತ್ತರ, 3.77ಮೀ. ಉದ್ದವಿದ್ದಾನೆ. ಬಲರಾಮನನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. (ದಿಗ್ವಿಜಯ ನ್ಯೂಸ್)
ಬ್ರಿಟನ್ನಲ್ಲಿ ಕೇರಳ ಮೂಲದ ನರ್ಸ್, ಆಕೆಯ ಮಕ್ಕಳಿಬ್ಬರ ದುರಂತ ಸಾವು: ಪತಿಯನ್ನು ವಶಕ್ಕೆ ಪಡೆದ ಪೊಲೀಸರು
15 ರನ್ಗೆ ಆಲೌಟ್: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಸಿಡ್ನಿ ಥಂಡರ್