ಮೈಸೂರು: ಹಳೇ ದ್ವೇಷ, ವೈಷಮ್ಯದ ಹಿನ್ನೆಲೆಯಲ್ಲಿ ನಗರದಲ್ಲಿ ದುಷ್ಕರ್ಮಿಗಳು ಇಬ್ಬರಿಗೆ ಚಾಕುವಿನಿಂದ ಇರಿದ ಪರಿಣಾಮ ಒಬ್ಬ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ನಗರದ ಕ್ಯಾತಮಾರನಹಳ್ಳಿಯ ವೆಂಕಟೇಶ್ ಅಲಿಯಾಸ್ ಕರಿಯ(24) ಮೃತರು. ಚಾಕು ಇರಿತಕ್ಕೊಳಗಾದ ನವೀನ್ ಸ್ಥಿತಿ ಗಂಭೀರವಾಗಿದೆ. ಚಿಕನ್ ಚಂದ್ರು ಮತ್ತು ಶೆಟ್ಟಿ ಆರೋಪಿಗಳಾಗಿದ್ದು, ಇದೀಗ ತಲೆಮರೆಸಿಕೊಂಡಿದ್ದಾರೆ.
ಏನಿದು ಪ್ರಕರಣ?: ಕೆ.ಎಂ.ಹಳ್ಳಿ ಅಶ್ವತ್ಥಕಟ್ಟೆ ಬಳಿ ನವೀನ್ ಹಾಗೂ ವೆಂಕಟೇಶ್ ಬುಧವಾರ ರಾತ್ರಿ ಮಾತನಾಡುತ್ತಾ ನಿಂತಿದ್ದಾಗ ಅಲ್ಲಿಗೆ ಬಂದ ಚಂದ್ರು ಹಾಗೂ ಶೆಟ್ಟಿ ಕ್ಯಾತೆ ತೆಗೆದು ಗಲಾಟೆ ಮಾಡಿದ್ದಾರೆ. ಈ ವೇಳೆ ಶೆಟ್ಟಿ ಎಂಬಾತ ವೆಂಕಟೇಶ್ಗೆ ಚಾಕುವಿನಿಂದ ಇರಿದಿದ್ದಾನೆ. ವೆಂಕಟೇಶ್ ಸಹಾಯಕ್ಕೆ ಬಂದ ನವೀನ್ಗೂ ಚಾಕು ಹಾಕಿದ್ದು, ತೀವ್ರ ಗಾಯಗೊಂಡ ಇಬ್ಬರನ್ನೂ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ವೆಂಕಟೇಶ್ ಮೃತಪಟ್ಟರು. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.