ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ 20 ಅಡಿ ಕಂದಕಕ್ಕೆ ಬಿದ್ದ ಮುಸ್ಲಿಂ ಯುವಕನನ್ನು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ಮೊಹಮ್ಮದ್ ಬಾಷಾ ಎಂಬುವರು ಭಾನುವಾರ ಟೋಯಿಂಗ್ ವಾಹನದಲ್ಲಿ ಟ್ರ್ಯಾಕ್ಟರ್ ಟೋಯಿಂಗ್ ಮಾಡಿಕೊಂಡು ಬರುತ್ತಿದ್ದರು. 7ನೇ ತಿರುವಿನಲ್ಲಿ ಟೋಯಿಂಗ್ ವಾಹನ ಘಾಟಿ ಹತ್ತಲಾಗದೆ ನಿಂತಿತ್ತು. ವಾಹನದಿಂದ ಕೆಳಗಿಳಿದ ಮೊಹಮ್ಮದ್ ಬಾಷಾ ಚಾಲಕನಿಗೆ ನಿರ್ದೇಶನ ನೀಡುತ್ತಿದ್ದರು. ಈ ವೇಳೆ ವಾಹನ ದಿಢೀರ್ ಹಿಂದಕ್ಕೆ ಬಂದಿದ್ದು ಮೊಹಮ್ಮದ್ ಬಾಷಾ ತಪ್ಪಿಸಿಕೊಳ್ಳುವ ಭರದಲ್ಲಿ ಘಾಟಿಯಿಂದ ಕೆಳಗೆ ಬಿದ್ದಿದ್ದರು. ಅದೇ ಮಾರ್ಗವಾಗಿ ಆಗುಂಬೆಗೆ ತೆರಳುತ್ತಿದ್ದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಮೊಹಮ್ಮದ್ ಬಾಷಾ ಅವರ ರಕ್ಷಣೆಗೆ ಧಾವಿಸಿದ್ದಾರೆ. ಪ್ರವಾಸಿಗರ ವಾಹನಗಳಲ್ಲಿದ್ದ ಬೆಡ್ಶೀಟ್, ಹಗ್ಗವಾಗಿ ಬಳಸಿ ಕಂದಕ್ಕೆ ಇಳಿದು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮೊಹಮ್ಮದ್ ಬಾಷಾ ಅವರನ್ನು ರಕ್ಷಿಸಿ ಮೇಲೆತ್ತಿದ್ದಾರೆ. ಅವರಿಗೆ ಸೊಂಟ ಮತ್ತು ತಲೆಗೆ ತೀವ್ರ ಪೆಟ್ಟಾಗಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.