ಮಸ್ಕಿ: ವಿಧಾನಸಭೆಯ ಉಪಚುನಾವಣೆಗಾಗಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಬುಧವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.
ಮನೆ ದೇವರು ಉರುಕುಂದಿ ಈರಣ್ಣ ಹಾಗೂ ಮನೆ ಮುಂದಿನ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ಪ್ರತಾಪಗೌಡರು, ಅಂಕಲಿಮಠಕ್ಕೆ ತೆರಳಿ ಶ್ರೀ ವೀರಭದ್ರ ಮಹಾಸ್ವಾಮೀಜಿ, ಮಸ್ಕಿಯ ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರನ್ನು ಭೇಟಿ ಮಾಡಿ, ಆಶೀರ್ವಾ ಪಡೆದುಕೊಂಡರು. ನಂತರ ಬಿಜೆಪಿ ಕಚೇರಿಯಿಂದ ತಮ್ಮ ಬೆಂಬಲಿಗರೊಂದಿಗೆ ತಾಪಂ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ರಾಜಶೇಖರ ಡಂಬಳಗೆ ನಾಮಪತ್ರ ಸಲ್ಲಿಸಿದರು. ಅವರ ಜತೆ ಹಿರಿಯ ವಕೀಲ ಮಸ್ಕಿ ನಾಗರಾಜ ರಾಯಚೂರು ಇದ್ದರು.
ತಮ್ಮ ಸ್ವಗ್ರಾಮ ತುರ್ವಿಹಾಳದ ಮನೆಯಲ್ಲಿ ಹುಲಿಗೆಮ್ಮ ದೇವಿಗೆ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡರು, ಶಂಕರಲಿಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಂಕಲಿಮಠದ ಶ್ರೀ ವೀರಭಧ್ರ ಮಹಾ ಸ್ವಾಮೀಜಿಯಿಂದ ಆಶೀರ್ವಾದ ಪಡೆದರು. ನಂತರ ತಮ್ಮ ಬೆಂಬಲಿಗರೊಂದಿಗೆ ತಾಪಂ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ರಾಜಶೇಖರ ಡಂಬಳಗೆ ನಾಮಪತ್ರ ಸಲ್ಲಿಸಿದರು. ಅವರ ಜತೆ ಹಿರಿಯ ವಕೀಲ ಸೋಮಲಿಂಗಪ್ಪ ಇದ್ದರು.