ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ.
ಗೋ ಸಾಗಾಟ ಕುರಿತ ನಿಯಮಗಳ ಸೂಚನೆ ನೀಡಿದ್ದ ಜಿಲ್ಲಾಧಿಕಾರಿಯನ್ನು “ಫಸ್ಟ್ ಮೊಲೆನ್ ಕರ್ತ್ ಕೆರೊಡು'(ಮೊದಲು ಅವಳನ್ನು ಕಡಿದು ಕೊಲ್ಲಬೇಕು) ಎಂದು ತುಳುವಿನಲ್ಲಿ ಬೆದರಿಕೆ ಹಾಕಲಾಗಿದೆ. ಇದರ ಬೆನ್ನಲ್ಲೇ ಸಿಂಧೂ ಬಿ.ರೂಪೇಶ್ ಸೇರಿದಂತೆ 13 ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿರಿ ಸುದ್ದಿಗಾಗಿ ಕೊಲೆ ಆರೋಪಿ ಮನೆಗೆ ಬೆಂಕಿ ಹಚ್ಚಿಸಿದ್ದ ವರದಿಗಾರ ಅರೆಸ್ಟ್!
ಬಕ್ರೀದ್ ಹಬ್ಬದ ಸಂದರ್ಭ ಅಕ್ರಮವಾಗಿ ಗೋ ಸಾಗಾಟ ಆಗದಂತೆ ತಡೆಯಬೇಕು. ಆದರೆ, ಗೋ ಸಾಗಾಟ ತಡೆ ವೇಳೆ ಯಾರೂ ಕಾನೂನು ಕೈಗೆತ್ತಿಕೊಳ್ಳದೆ ಪೊಲೀಸರಿಗೆ ದೂರು ನೀಡಬೇಕು ಎಂದು ಡಿಸಿ ಸಿಂಧು ಬಿ. ರೂಪೇಶ್ ಸೋಮವಾರ ಮಾಧ್ಯಮ ಹೇಳಿಕೆ ನೀಡಿದ್ದರು. ಅದನ್ನು ಕೆಲ ವೆಬ್ಸೈಟ್ಗಳಲ್ಲಿ ಅಪಾರ್ಥ ಬರುವ ರೀತಿಯಲ್ಲಿ ಪ್ರಕಟಿಸಲಾಗಿತ್ತು. ಅದನ್ನೇ ಉಲ್ಲೇಖಿಸಿ ಸಂಘಟನೆಯೊಂದರ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ವ್ಯಕ್ತಿಯೊಬ್ಬ “ಫಸ್ಟ್ ಮೊಲೆನ್ ಕರ್ತ್ ಕೆರೊಡು'(ಮೊದಲು ಅವಳನ್ನು ಕಡಿದು ಕೊಲ್ಲಬೇಕು) ಎಂದು ತುಳುವಿನಲ್ಲಿ ಬೆದರಿಕೆ ಹಾಕಿದ್ದ. ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ.
ಈ ಬಗ್ಗೆ ‘ವಿಜಯವಾಣಿ’ಗೆ ಮಾಹಿತಿ ನೀಡಿರುವ ಡಿಸಿಪಿ ಅರುಣಾಂಗ್ಶುಗಿರಿ ಅವರು ಜಿಲ್ಲಾಧಿಕಾರಿ ಈವರೆಗೆ ದೂರು ನೀಡಿಲ್ಲ. ಅವರಿಗೆ ದೂರು ನೀಡುವಂತೆ ತಿಳಿಸಿದ್ದೇವೆ. ನಾವು ಸ್ವಯಂಪ್ರೇರಣೆಯಿಂದ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.
ಈ ನಡುವೆಯೇ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಜಕುಮಾರ್ ಕತ್ರಿ, ನಾಗಾಂಬಿಕ ದೇವಿ ಸೇರಿ 13 ಹಿರಿಯ ಐಎಎಸ್ ಅಧಿಕಾರಿಗಳಿಗೆ ಸರ್ಕಾರ ಮಂಗಳವಾರ ವಿವಿಧ ಜವಾಬ್ದಾರಿ ನೀಡಿ ಸ್ಥಳ ನಿಯುಕ್ತಿಗೊಳಿಸಿದೆ. ಸಿಂಧೂ ಬಿ ರೂಪೇಶ್ ಅವರನ್ನು-ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸವಿರ್ಸ್ (ಡಿಪಿಎಆರ್) ನಿರ್ದೇಶಕರ ಸ್ಥಾನಕ್ಕೆ ನಿಯುಕ್ತಿ ಮಾಡಲಾಗಿದೆ.