More

    ಮಗನಿಂದಲೇ ತಂದೆಯ ಕೊಲೆ?

    ಬೆಳ್ತಂಗಡಿ: ಬೆಳ್ತಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜು ಬಳಿ ನಿವಾಸಿ ವಾಸು ಸಫಲ್ಯ(66) ಎಂಬುವರನ್ನು ಸೋಮವಾರ ಮುಂಜಾನೆ ತಲವಾರಿನಿಂದ ಕಡಿದು ಕೊಲೆ ಮಾಡಲಾಗಿದೆ. ಘಟನೆಯಲ್ಲಿ ಅವರ ಪುತ್ರ ದಯಾನಂದ ಎಂಬುವವನ ಕೈವಾಡ ಶಂಕಿಸಲಾಗಿದ್ದು, ಪರಾರಿಯಾಗಿರುವ ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
    ಕಾರು ಚಾಲಕರಾಗಿದ್ದ ವಾಸು ಸಫಲ್ಯ ಈ ಪ್ರದೇಶದ ಹಿರಿಯ ಚಾಲಕ ಎಂದೇ ಗುರುತಿಸಿಕೊಂಡಿದ್ದರು. ಬೆಳಗ್ಗಿನ ಜಾವ ಕಾಲೇಜು ಮೈದಾನಕ್ಕೆ ಸೋಮವಾರ ಬೆಳಗ್ಗೆ ಎಂದಿನಂತೆ ವಾಕಿಂಗ್ ಹೋಗುತ್ತಿದ್ದಾಗ, ಮನೆಯ ಸಮೀಪದಲ್ಲೇ ಹಿಂದಿನಿಂದ ಬಂದು ತಲವಾರಿನಿಂದ ಕಡಿದು ಗಂಭೀರ ಗಾಯಗೊಳಿಸಲಾಗಿತ್ತು. ಅವರನ್ನು ಸ್ಥಳೀಯರು ತಕ್ಷಣ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ, ಜೀವ ಉಳಿಸಲು ಸಾಧ್ಯವಾಗಲಿಲ್ಲ.

    ವಾಸು ಸಫಲ್ಯರವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದಾರೆ.
    ದಯಾನಂದ ಮತ್ತು ತಂದೆ ತಾಯಿ, ಸಹೋದರನ ಪತ್ನಿ ಮನೆಯಲ್ಲಿ ವಾಸಿಸುತ್ತಿದ್ದರು. ದಯಾನಂದ ದುಶ್ಚಟಗಳನ್ನು ಹೊಂದಿಲ್ಲದಿದ್ದರೂ, ಐಷಾರಾಮಿ ಜೀವನ ನಡೆಸುತ್ತಿದ್ದ. ಇತ್ತೀಚೆಗೆ ಕೆಲಸವಿಲ್ಲದೆ ಮನೆಯಲ್ಲೇ ಇದ್ದು ತಂದೆಯೊಂದಿಗೆ ಹಣಕ್ಕಾಗಿ ಜಗಳವಾಡುತ್ತಿದ್ದ. ಒಂದೆರಡು ಬಾರಿ ಅವರ ವಿಷಯ ಠಾಣೆ ಮೆಟ್ಟಿಲು ಏರಿದ್ದು, ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
    ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ, ಎಸ್‌ಐ ನಂದಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೂವರು ಕೃತ್ಯ ನಡೆಸಿದ ಶಂಕೆ
    ಆರೋಪಿಗೆ ಇನ್ನಿಬ್ಬರು ಸಹಕಾರ ನಿಡಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ. ಮನೆಯಲ್ಲಿ ಜಗಳವಾದಾಗ ಸಂದರ್ಭದಲ್ಲಿ, ಮಗನೇ ತಂದೆಯನ್ನು ಕೊಲೆ ಮಾಡಿದ ಘಟನೆಗಳು ನಡೆಯುತ್ತಿವೆ ಎಂದು ಆತ ಒಮ್ಮೆ ಹೇಳಿದ್ದ. ಇದೇ ರೀತಿ ಕೊಲೆಗೆ ತನ್ನಿಬ್ಬರ ಸ್ನೇಹಿತರನ್ನು ಬಳಸಿದ್ದು, ಕೃತ್ಯ ನಡೆದ ಸ್ಥಳದಿಂದ ಈತನನ್ನು ಸ್ಥಳ ಬದಲಾಯಿಸಲು ಸಹಕರಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೃತ್ಯ ನಡೆಸಿದ ತಲವಾರನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

    ಗೌರವಯುತ ಕುಟುಂಬ
    ಇವರ ಇನ್ನಿಬ್ಬರು ಪುತ್ರರಾದ ಸುದರ್ಶನ್ ಬೆಂಗಳೂರು ಬಿಟಿಎಂಸಿ ಬಸ್‌ನಲ್ಲಿ ಚಾಲಕರಾಗಿದ್ದು, ಕೆಲವು ವರ್ಷಗಳ ಹಿಂದೆ ಚಲಿಸುತ್ತಿರುವ ಬಸ್‌ಗೆ ಬೆಂಕಿ ಕಾಣಿಸಿಕೊಂಡಾಗ ಜೀವದ ಹಂಗು ತೊರೆದು ಹಲವು ಮಕ್ಕಳನ್ನು ರಕ್ಷಿಸಿ ಜನಮೆಚ್ಚುಗೆ ಗಳಿಸಿದ್ದರು. ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ, ಗೌರವಿಸಿದ್ದವು. ಇನ್ನೋರ್ವ ಪುತ್ರ ನಾಗರಾಜ್ ಉಡುಪಿಯಲ್ಲಿ ಕೆಎಸ್‌ಆರ್‌ಟಿಸಿ ಚಾಲಕರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts