ಬ್ಯಾಡಗಿ: ನಿತ್ಯ ಮದ್ಯ ಸೇವಿಸಿ ಬಂದು ತಂದೆ-ತಾಯಿ ಹಾಗೂ ಕುಟುಂಬದವರಿಗೆ ಅವಾಚ್ಯವಾಗಿ ನಿಂದಿಸಿ ಹಿಂಸೆ ಕೊಡುತ್ತಿದ್ದ ಅಣ್ಣನನ್ನು ತಮ್ಮನೇ ಕೊಡಲಿಯಿಂದ ಹೊಡೆದು ಕೊಲೆಗೈದ ಘಟನೆ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಜರುಗಿದೆ.
ನಾಗರಾಜ ಗುಡ್ಡಪ್ಪ ಗೊರವರ (22) ಮೃತಪಟ್ಟವ. ಮದ್ಯವ್ಯಸನಿಯಾಗಿದ್ದ ಈತ ಕುಡಿದು ಬಂದು ಮನೆಯ ಎಲ್ಲರೊಂದಿಗೂ ಜಗಳ ಮಾಡುತ್ತಿದ್ದನು. ಹಲವು ಸಲ ಮನೆಯವರು ಬುದ್ಧಿ ಹೇಳಿದರೂ ಕೇಳಿರಲಿಲ್ಲ. ಮಂಗಳವಾರವೂ ಕುಡಿದು ಬಂದು ತಂದೆ-ತಾಯಿಗೆ ಅವಾಚ್ಯವಾಗಿ ಬೈದು ಹಲ್ಲೆಗೆ ಯತ್ನಿಸಿದ್ದಾನೆ. ತಿಳಿ ಹೇಳಿದರೂ ಕೇಳಿರಲಿಲ್ಲ. ಹೀಗಾಗಿ ಅಣ್ಣನ ವರ್ತನೆಗೆ ಬೇಸತ್ತು ತಮ್ಮ ದಿಳ್ಳೆಪ್ಪ (20) ಮನೆಯಲ್ಲಿದ್ದ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಭಯಾನಕ ಘಟನೆ ಕಂಡು ಬುಡಪನಹಳ್ಳಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.