ಅರಸೀಕೆರೆ: ಹಾಸನ ಜಿಲ್ಲಾಡಳಿತ ಕರೊನಾ ಮಹಾಮಾರಿಯ ಭೀತಿ ದೂರ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಜನರನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ತೊಡಗಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಇಲ್ಲಿನ ನಗರಸಭೆಯ ಆರು ನೌಕರರು, ಕಚೇರಿ ಸಮಯದಲ್ಲಿ ಟಿಕ್ಟಾಕ್ ಮಾಡುತ್ತಾ ಕಾಲ ಹರಣ ಮಾಡುತ್ತಿರುವುದು ಬಹಿರಂಗವಾಗಿದೆ.
ಈ ನಗರಸಭಾ ನೌಕರರು ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಪಾಲಿಸಬೇಕೆನ್ನುವ ನಿಯಮವನ್ನೂ ಧಿಕ್ಕರಿಸಿ ಟಿಕ್ಟಾಕ್ ಮಾಡುವ ಮೂಲಕ ಅಗ್ಗದ ಪ್ರಚಾರ ಪಡೆಯಲು ಮುಂದಾಗಿರುವುದು ಬಯಲಾಗಿದೆ.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದ ನೌಕರರೇ ಸರ್ಕಾರಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘‘ಕ್ಷೇತ್ರದ ಪ್ರಭಾವಿ ರಾಜಕಾರಣಿಗಳ ಕೃಪಾಕಟಾಕ್ಷದಿಂದ ಕೆಲವರು ಹಲವು ವರ್ಷಗಳಿಂದ ಒಂದೇ ಕಚೇರಿಯಲ್ಲಿ ಬೀಡು ಬಿಟ್ಟಿದ್ದಾರೆ. ಉನ್ನತಾಧಿಕಾರಿಗಳು ಸಮಗ್ರ ಮಾಹಿತಿ ಪಡೆದು ತಕ್ಷಣವೇ ಅಮಾನತು ಮಾಡಬೇಕು. ಇಲ್ಲವೇ ಎತ್ತಂಗಡಿ ಮಾಡಬೇಕು’’ ಎನ್ನುವ ಒತ್ತಾಯ ಕೇಳಿಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅರಸೀಕೆರೆ ಪೌರಾಯುಕ್ತ ಎಂ.ಜಿ.ಕಾಂತರಾಜ್, ‘‘ನಗರಸಭಾ ಸಿಬ್ಬಂದಿ ಕಚೇರಿ ವೇಳೆ ಟಿಕ್ಟಾಕ್ನಲ್ಲಿ ತೊಡಗಿರುವುದು ಸರಿಯಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು ಎಲ್ಲರಿಗೂ ಕಾರಣ ಕೇಳಿ ನೊಟೀಸ್ ಜಾರಿ ಮಾಡಲಾಗಿದೆ’’ ಎಂದು ತಿಳಿಸಿದರು.
VIDEO | ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತ ಪ್ರಾಣಿ ನೋಡಿ ಬೆರೆಗಾದ ಗ್ರಾಮಸ್ಥರು