ಮುಂಬೈ: ವೈದ್ಯರ ಬಳಿಗೆ ಹೋಗಬೇಕಿದೆ ನನಗೆ ಪಾಸ್ ನೀಡಿ ಎಂದು ಆಕೆ ಪದೇಪದೆ ಪೊಲೀಸರನ್ನು ಒತ್ತಾಯಿಸುತ್ತಲೇ ಇದ್ದಳು. ಒಂದೆರಡು ಬಾರಿಯಲ್ಲ, ಸತತ ನಾಲ್ಕು ದಿನಗಳಿಂದ ಅದಕ್ಕಾಗಿ ಆನ್ಲೈನ್ನಲ್ಲಿ ಕೋರಿಕೆ ಸಲ್ಲಿಸುತ್ತಲೇ ಇದ್ದಳು. ಆದರೆ, ಪೊಲೀಸರಿಗೇಕೋ ಈ ಕೋರಿಕೆ ಅಸಂಗತ ಹಾಗೂ ಅನಗತ್ಯ ಎನಿಸಿ ಪಾಸ್ ನಿಡಲು ನಿರಾಕರಿಸಿದರು. ಕೊನೆಗೆ ವೈದ್ಯರ ಬಳಿಗೆ ಹೋಗಲಾಗದೆ ‘ ಜೋಯ್’ ಕೊನೆಯುಸಿರೆಳೆದ. ಕುಟುಂಬದ ಸದಸ್ಯನಂತಿದ್ದ ಜೋಯ್ ಅಗಲಿಕೆಗೆ ಕಣ್ಣೀರು ಹಾಕದೆ ಬೇರೆ ದಾರಿ ಆಕೆಗಿರಲಿಲ್ಲ.
ಇಷ್ಟಕ್ಕೂ ಜೋಯ್, ನವಿ ಮುಂಬೈನ ನಿವಾಸಿ ಕುಮಾರಿ ಚಂದ್ರನ್ ಮನೆಯಲ್ಲಿದ್ದ ಪ್ರೀತಿಯ ಶ್ವಾನವಾಗಿತ್ತು. ಜೋಯ್ ಆರೋಗ್ಯ ಸರಿಯಿಲ್ಲ, ವೈದ್ಯರ ಬಳಿ ಕೊಂಡೊಯ್ಯಬೇಕು ಪಾಸ್ ನೀಡಿ ಎಂದು ಚಂದ್ರನ್ ನಾಲ್ಕು ಬಾರಿ ಬೃಹನ್ ಮುಂಬೈ ಪೊಲೀಸರಿಗೆ ಮನವಿ ಮಾಡಿದ್ದರು. ನಿಮ್ಮ ಕೋರಿಕೆಯನ್ನು ಪರಿಶೀಲಿಸಲಾಗುತ್ತಿದೆ, ಕಾಯಿರಿ ಎಂಬ ಉತ್ತರ ಬಂದಿತು. ಕೊನೆಗೆ ಅವರ ಮನವಿಯೇ ಪರಿಗಣಿಸಲು ಯೋಗ್ಯವಾಗಿಲ್ಲ ಎಂದ ಪೊಲೀಸರು ಪಾಸ್ ನಿಡಲು ನಿರಾಕರಿಸಿದರು.
ಈ ನಡುವೆ ಪಶು ವೈದ್ಯರನ್ನು ಪೋನ್ ಮೂಲಕ ಚಂದ್ರನ್ ಸಂಪರ್ಕಿಸಿದರು. ಕೆಲ ದಿನಗಳಮಟ್ಟಿಗೆ ಅನುಕೂಲವಾಗುವಂತೆ ಔಷಧಗಳನ್ನು ನೀಡುವಂತೆ ಅವರು ಸೂಚಿಸಿದರಾದರೂ, ಸತತ ನಾಲ್ಕು ದಿನಗಳವರೆಗೆ ಅನಾರೋಗ್ಯದಿಂದ ಬಳಲಿದ ಜೋಯ್ ಕೊನೆಗೆ ಹೃದಯಸ್ತಂಭನದಿಂದ ಉಸಿರು ನಿಲ್ಲಿಸಿದ.
ಚಂದ್ರನ್ ನೆರೆಮನೆಯಲ್ಲಿದ್ದ ಕಾರ್ಯಕರ್ತರೊಬ್ಬರು ಪೊಲೀಸರ ನಿರ್ಲಕ್ಷ್ಯದಿಂದಾದ ಘಟನೆಯನ್ನು ಇಲಾಖೆ ಗಮನಕ್ಕೆ ತಂದರು. ಇದಕ್ಕೆ ಸಂತಾಪ ಸೂಚಿಸುವುದನ್ನು ಹೊರತುಪಡಿಸಿದರೆ, ಪೊಲೀಸರು ಬೇರೇನೂ ಮಾಡುವಂತಿರಲಿಲ್ಲ. ಒಟ್ಟಿನಲ್ಲಿ ಪ್ರಾಣಿಗಳ ಬಗ್ಗೆಯೂ ಅಂತಃಕರಣದಿಂದ ಸ್ಪಂದಿಸಬೇಕಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ವಿಪರ್ಯಾಸದ ಸಂಗತಿ ಎಂದರೆ ನಾಯಿಯ ಅಗಲುವಿಕೆಯಿಂದ ಶೋಕದಲ್ಲಿದ್ದ ಕುಟುಂಬಕ್ಕೆ ಮಾಹಿತಿ ತಿಳಿದವರು ವಿಚಾರಿಸಿದ್ದೇನು ಗೊತ್ತಾ? ನಿಮ್ಮ ನಾಯಿಗೆ ಕೋವಿಡ್-19 ಬಂದು ಸಾವಿಗೀಡಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ ಎಂದು ಮಾನವೀಯತೆ ಮರೆತು ಸಲಹೆ ನೀಡಿದ್ದಾರೆ.
ಬೆಂಗಳೂರು ಸೇರಿ ರಾಜ್ಯದ ಹಲವು ನಗರಗಳಲ್ಲಿ ಆಹಾರವಿಲ್ಲದೆ, ಬೀದಿನಾಯಿಗಳು ಸಂಕಷ್ಟಕ್ಕೆ ಸಿಲುಕಿವೆ. ಇವುಗಳಿಗೆ ಆಹಾರ ನೀಡಲು ಯಾರೂ ಹೊರಬರುವಂತಿಲ್ಲ ಎನ್ನುವುದು ವಿಪರ್ಯಾಸ.
ರಾಜ್ಯದಲ್ಲಿ 226ಕ್ಕೇರಿದ ಕರೊನಾ ಸೋಂಕಿತರು: 47 ಮಂದಿ ಬಿಡುಗಡೆ- ಬೆಳಗಾವಿಯಲ್ಲಿ ನಾಲ್ಕು ಹೊಸ ಪ್ರಕರಣ