ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಇದುವರೆಗೂ 35ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಲಾಗಿದೆ. ಈ ಪೈಕಿ ಜನಪ್ರಿಯ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿ, ಆದಿತ್ಯ ಚೋಪ್ರಾ ಸೇರಿದಂತೆ ಕೆಲವರು ಪ್ರಮುಖರಿದ್ದಾರೆ. ಈಗ ಕಂಗನಾಗೂ ಮುಂಬೈ ಪೊಲೀಸ್ ಸಮನ್ಸ್ ಕೊಟ್ಟು, ವಿಚಾರಣೆಗೆ ಬರುವುದಕ್ಕೆ ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡಿಗರಿಂದ ಕನ್ನಡಿಗರಿಗಾಗಿ ಹೊಸ ಓಟಿಟಿ …
ಇಷ್ಟಕ್ಕೂ ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೂ, ಕಂಗನಾ ರಣಾವತ್ ಅವರಿಗೂ ಸಂಬಂಧವೇನು ಎಂಬ ಪ್ರಶ್ನೆ ಸಹಜವೇ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ, ಅವರಿಗೆ ದೊಡ್ಡ ಮಟ್ಟದಲ್ಲಿ ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದು ಅದೇ ಕಂಗನಾ. ಬಾಲಿವುಡ್ನಲ್ಲಿ ಪ್ರಚಲಿತದಲ್ಲಿರುವ ಸ್ವಜನಪಕ್ಷಪಾತದ ಕುರಿತಾಗಿ ಪ್ರಸ್ತಾಪಿಸಿದ್ದ ಕಂಗನಾ, ಅದೇ ನೆಪೋಟಿಸಂನಿಂದ ಸುಶಾಂತ್ ಆತ್ಮಹತ್ಯೆಯ ದಾರಿ ತುಳಿಯಬೇಕಾಯಿತು ಎಂದು ಹೇಳಿದ್ದರು.
ಕಂಗನಾ ಹೇಳಿಕೆಯ ನಂತರ ಬಾಲಿವುಡ್ನಲ್ಲಿ ದೊಡ್ಡ ಕೋಲಾಹಲವೇ ಉಂಟಾಗಿತ್ತು. ನೆಪೋಟಿಸಂ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಸಹನೆ ವ್ಯಕ್ತಪಡಿಸಿದ್ದರು. ಅದರಲ್ಲೂ ಸ್ವಜನಪಕ್ಷಪಾತವನ್ನು ಪೋಷಿಸುತ್ತಿದ್ದಾರೆ ಎಂದು ಹೇಳಲಾಗುವ ಕರಣ್ ಜೋಹಾರ್ ವಿರುದ್ಧ ಸಿಕ್ಕಾಪಟ್ಟೆ ಟೀಕೆಗಳು ವ್ಯಕ್ತವಾಗಿದ್ದವು. ಇನ್ನು ಅವರು ಚಿತ್ರರಂಗಕ್ಕೆ ಪರಿಚಯಿಸಿದ ಆಲಿಯಾ ಭಟ್, ವರುಣ್ ಧವನ್ ಮುಂತಾದವರನ್ನೂ ನೆಟ್ಟಿಗರು ಟ್ರೋಲ್ ಮಾಡಿದರು.
ಈ ಸಂಬಂಧ, ಈ ತಿಂಗಳ ಆರಂಭದಲ್ಲಿಯೇ ಕಂಗನಾಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಅದಕ್ಕೆ ಸರಿಯಾಗಿ, ಕಂಗನಾ ಕೂಡಾ ತಾವು ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿದ್ದರು. ಇನ್ನು ಪೊಲೀಸರು ಸಹ ಮುಂಬೈನ ಅವರ ನಿವಾಸಕ್ಕೆ ಜುಲೈ 3ರಂದು ಹೋಗಿ, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಆದರೆ, ಕಂಗನಾ ಅವರ ಮ್ಯಾನೇಜರ್ ಆ ಸಮನ್ಸ್ ಸ್ವೀಕರಿಸಿರಲಿಲ್ಲ.
ಇದನ್ನೂ ಓದಿ: ಇದು ಆಧುನಿಕ ರಾಮಾಚಾರಿಯ ಕಥೆ!
ಇದೀಗ ಮುಂಬೈ ಪೊಲೀಸರು ಹೊಸದಾಗಿ ಸಮನ್ಸ್ ಕೊಟ್ಟಿದ್ದಾರೆ. ಸದ್ಯ ಕಂಗನಾ ಮನಾಲಿಯಲ್ಲಿ ಇರುವುದರಿಂದ, ಅವರು ಆನ್ಲೈನ್ ಮೂಲಕ ವಿಚಾರಣೆ ಎದುರಿಸಬಹುದು ಎಂದು ಹೇಳಲಾಗುತ್ತಿದೆ. ಈ ಸಂಬಂಧ, ಪೊಲೀಸರ ಜತೆಗೆ ಮಾತನಾಡಿರುವ ಕಂಗನಾ ಸಹೋದರಿ ರಂಗೋಲಿ, ಪ್ರಶ್ನೆಗಳನ್ನು ಇಮೇಲ್ ಮೂಲಕ ಕಳಿಸುವುದಕ್ಕೆ ಹೇಳಿದ್ದಾರಂತೆ. ಸದ್ಯದಲ್ಲೇ ಪೊಲೀಸರು ಕಂಗನಾ ಅವರಿಗೆ ಪ್ರಶ್ನೆಗಳನ್ನು ಕಳುಹಿಸುತ್ತಾರೆ ಎಂದು ಹೇಳಲಾಗಿದೆ.