ಮುಂಬೈ: ಐಪಿಎಲ್ ಕ್ರಿಕೆಟ್ನ ಮುಂಬೈ ಇಂಡಿಯನ್ಸ್ ಟೀಂ ಬ್ಯಾಟ್ಸ್ಮನ್ ಸೂರ್ಯ ಕುಮಾರ್ ಯಾದವ್ ಅವರಿಗೂ ಲಾಕ್ಡೌನ್ ಬಿಸಿ ತಟ್ಟಿದೆ. ಅವರ ಪ್ರೀತಿಯ ನಾಯಿಮರಿ (ಪಪ್ಪಿ)ಗೆ ತುರ್ತಾಗಿ ಎಂಆರ್ಐ ಸ್ಕ್ಯಾನಿಂಗ್ ಮಾಡಿಸಬೇಕಿದ್ದು, ಯಾವ ಆಸ್ಪತ್ರೆ ಅಥವಾ ಕ್ಲಿನಿಕ್ ಗೆ ಹೋಗಬೇಕು ಎಂದು ದಯವಿಟ್ಟು ತಿಳಿಸಿ ಎಂದು ಟ್ವೀಟ್ ಮೂಲಕ ಕೋರಿದ್ದಾರೆ.
“ಶುಭೋದಯ, ನನ್ನ ನಾಯಿಮರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಬೇಕು. ಮುಂಬೈನ ಯಾವ ಆಸ್ಪತ್ರೆ ಅಥವಾ ಕ್ಲಿನಿಕ್ಗೆ ಪಪ್ಪಿಯನ್ನು ಕರೆದೊಯ್ಯಬಹುದು ಎಂದು ತಿಳಿಸಿ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಿ ಹೋಗುವುದು ಎಂದೇ ತಿಳಿಯುತ್ತಿಲ್ಲ. ನಾಯಿಮರಿಗೆ ನಿಯಮಿತವಾಗಿ ಸೆಳೆತ ಕಾಣಿಸಿಕೊಂಡಿದೆ. ಸಹಾಯ ಮಾಡಿ” ಎಂದು ಆದಿತ್ಯ ಠಾಕ್ರೆ, ಮುಂಬೈ ಪೊಲೀಸರು ಮತ್ತು ಮುಂಬೈ ಮಹಾನಗರ ಪಾಲಿಕೆಗೆ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ ಅಪಾಯಕಾರಿ ಟೆಸ್ಟ್ ಪಂದ್ಯವಿದ್ದಂತೆ ಕರೊನಾ; ಗಂಗೂಲಿ
ಈ ಹಿಂದೆಯೂ ಅಂದರೆ ಏಪ್ರಿಲ್ 27ರಂದು ಕೂಡ ನಾಯಿಮರಿಗೆ ಸಿರಪ್ ಬೇಕೆಂದು ಟ್ವೀಟ್ ಮಾಡಿದ್ದ ಸೂರ್ಯ ಯಾದವ್, ” ಹಲೋ, ಎಲ್ಲರೂ ಮನೆಯಲ್ಲೇ ಇದ್ದು ಸುರಕ್ಷಿತವಾಗಿದ್ದೀರಿ ಎಂದು ಭಾವಿಸುತ್ತೇನೆ. ನನ್ನ ನಾಯಿಮರಿ ಪಪ್ಪಿಗೆ ತುರ್ತಾಗಿ ‘NEUROPLUS’ ಮತ್ತು ‘Liva+’ ಸಿರಪ್ ಬೇಕು. ಹತ್ತಿರದ ಯಾವುದೇ ಮೆಡ್ಸ್ಟೋರ್ನಲ್ಲಿ ಈ ಸಿರಪ್ ಸಿಗುತ್ತಿಲ್ಲ. ಪೆಟ್ ಮೆಡ್ಸ್ಟೋರ್ ಅಥವಾ ಯಾವುದೇ ಪಿಇಟಿ ಅಂಗಡಿಯಲ್ಲಿ ಈ ಸಿರಪ್ ಇದ್ದರೆ ಯಾರಾದರೂ ತಿಳಿಸಿ. ನಿಮ್ಮಿಂದ ಬಹಳ ಸಹಾಯವಾಗುತ್ತದೆ. ಧನ್ಯವಾದಗಳು. ನಿಮ್ಮ ಆರೋಗ್ಯದ ಕಡೆ ಗಮನ ಇರಲಿ” ಎಂದಿದ್ದರು.
ವಿಶ್ವದಾದ್ಯಂತ ದುಸ್ವಪ್ನವಾಗಿ ಕಾಡುತ್ತಿರುವ ಕರೊನಾ ವೈರಸ್ ನಿಂದಾಗಿ ಈಗಾಗಲೇ ಕ್ರೀಡಾಕೂಟಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಕ್ರಿಕೆಟ್ ಕೂಡ ಹೊರತಾಗಿಲ್ಲ. 29 ವರ್ಷದ ಸೂರ್ಯ ಕುಮಾರ್ ಯಾದವ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಬೇಕಿತ್ತು. ಈಗ ಅವರು ತನ್ನ ನಾಯಿಮರಿಯ ಆರೋಗ್ಯ ಕಾಪಾಡುವಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ ನನ್ನ ಸಾವಿನ ಘೋಷಣೆಯೊಂದೇ ಬಾಕಿ ಇತ್ತು, ನಡೆಯಿತು ಪವಾಡ ಎಂದ ಪ್ರಧಾನಿ!