ಬೆಂಗಳೂರು: ಭಾರತ ಟಿ20 ತಂಡದ ಆಯ್ಕೆಯ ವೇಳೆ ಐಪಿಎಲ್ನಲ್ಲಿ ಮಿಂಚಿದ ಆಟಗಾರರ ನಿರ್ವಹಣೆಯನ್ನು ಪರಿಗಣಿಸುವುದು ಸಾಮಾನ್ಯ ಸಂಗತಿ. ಆದರೆ ಈ ಬಾರಿ ಟಿ20 ವಿಶ್ವಕಪ್ಗೆ ಭಾರತ ತಂಡದ ಆಯ್ಕೆಯ ವೇಳೆ ಐಪಿಎಲ್ ತಂಡಗಳ ಇತಿಹಾಸವನ್ನು ಆಯ್ಕೆ ಸಮಿತಿ ತುಸು ಗಂಭೀರವಾಗಿಯೇ ಪರಿಗಣಿಸಿದಂತಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಒಟ್ಟು 6 ಆಟಗಾರರಿಗೆ ಟಿ20 ವಿಶ್ವಕಪ್ ತಂಡದಲ್ಲಿ ಮಣೆ ಹಾಕಿರುವುದು ಇದಕ್ಕೆ ಸಾಕ್ಷಿ! ಇದಲ್ಲದೆ ಐಪಿಎಲ್ನಲ್ಲಿ ಇದುವರೆಗೆ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಆರ್ಸಿಬಿ ತಂಡ ಕಡೆಗಣನೆಗೆ ಒಳಗಾಗಿದ್ದು, ಕೇವಲ ಓರ್ವ ಆಟಗಾರನಷ್ಟೇ ವಿಶ್ವಕಪ್ ತಂಡದಲ್ಲಿದ್ದಾರೆ!
ಮುಂಬೈ ಇಂಡಿಯನ್ಸ್ ತಂಡದಿಂದ ನಾಯಕ ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ರಾಹುಲ್ ಚಹರ್ ಭಾರತೀಯ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದರಿಂದ ‘ಟೀಮ್ ಇಂಡಿಯಾ’ ಈಗ ಬಹುತೇಕ ‘ಮುಂಬೈ ಇಂಡಿಯನ್ಸ್’ ತಂಡದಂತೆಯೇ ಕಾಣಿಸುತ್ತಿದೆ!
ಇನ್ನು ಸ್ಪಿನ್ನರ್ ಯಜುವೇಂದ್ರ ಚಾಹಲ್, ಮೊಹಮದ್ ಸಿರಾಜ್ ಟಿ20 ವಿಶ್ವಕಪ್ಗೆ ಕಡೆಗಣಿಸಲ್ಪಟ್ಟಿರುವುದರಿಂದ ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿರುವ ಏಕೈಕ ಆರ್ಸಿಬಿ ಆಟಗಾರರಾಗಿದ್ದಾರೆ.
ಮುಂಬೈ ಇಂಡಿಯನ್ಸ್ ಬಳಿಕ ಹಾಲಿ ಹಾಗೂ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ಮತ್ತು ಮಾಜಿ ರನ್ನರ್ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ 2ನೇ ಅತ್ಯಧಿಕ ತಲ 2 ಆಟಗಾರರನ್ನು ಹೊಂದಿದೆ. ಚೆನ್ನೈ ತಂಡದ ರವೀಂದ್ರ ಜಡೇಜಾ ಜತೆಗೆ ಶಾರ್ದೂಲ್ ಠಾಕೂರ್ ತಂಡದಲ್ಲಿದ್ದಾರೆ. ಜತೆಗೆ ನಾಯಕ ಎಂಎಸ್ ಧೋನಿ ಮೆಂಟರ್ ಆಗಿ ಟೀಮ್ ಇಂಡಿಯಾ ಜತೆಗಿರುತ್ತಾರೆ. ಡೆಲ್ಲಿ ತಂಡದ ಆರ್. ಅಶ್ವಿನ್, ರಿಷಭ್ ಪಂತ್ ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಿಂದಲೂ ನಾಯಕ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಜತೆಗೆ ವೇಗಿ ಮೊಹಮದ್ ಶಮಿ ತಂಡದಲ್ಲಿದ್ದಾರೆ.
ಉಳಿದಂತೆ ಸನ್ರೈಸರ್ಸ್ (ಭುವನೇಶ್ವರ್) ಹಾಗೂ ಹಾಲಿ ರನ್ನರ್ಅಪ್ ಕೆಕೆಆರ್ (ವರುಣ್ ಚಕ್ರವರ್ತಿ) ತಂಡದಿಂದ ತಲಾ ಓರ್ವ ಆಟಗಾರ ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ತಂಡದ ಪರ ಆಡುವ ವೇಳೆ ಎಲ್ಲ ಆಟಗಾರರು ಐಪಿಎಲ್ನ ವೈರತ್ವ ಮತ್ತು ಜಟಾಪಟಿಗಳನ್ನು ಮರೆತು ಒಂದಾಗಿ ಆಡುತ್ತಾರೆ. ಹೀಗಾಗಿ ಈ ಐಪಿಎಲ್ ತಂಡವಾರು ಲೆಕ್ಕಾಚಾರಗಳು ಕುತೂಹಲ ಸಂಗತಿಯಾಗಿ ಮಾತ್ರ ಉಳಿಯಲಿವೆ.
ಟಿ20 ವಿಶ್ವಕಪ್ನಲ್ಲಿ ಭಾರತ-ಪಾಕ್ ಸೆಣಸಾಟಕ್ಕೆ ಮುನ್ನ ಮಾಜಿ ಕ್ರಿಕೆಟಿಗರ ವಾಕ್ಸಮರ