ಮುಧೋಳ: ಮಹಾತ್ಮ ಗಾಂಧಿ ಅವರು ಗ್ರಾಮ ಸ್ವರಾಜ್ ಕನಸು ಕಂಡಿದ್ದರು. ಆದರೆ 65 ವರ್ಷ ಆಳಿದ ಕಾಂಗ್ರೆಸ್ ಅದನ್ನು ನನಸು ಮಾಡಲಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಭಾನುವಾರ ಆಯೋಜಿಸಿದ್ದ ಮುಧೋಳ, ಜಮಖಂಡಿ, ತೇರದಾಳ ವಿಧಾನಸಭೆ ಕ್ಷೇತ್ರದ ಗ್ರಾಮ ಸ್ವರಾಜ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಂದಾಜು 94 ಸಾವಿರ ಅಭ್ಯರ್ಥಿಗಳು ಆಯ್ಕೆ ಆಗುತ್ತಾರೆ. ಈ ಎಲ್ಲ ಕಡೆ ಬಿಜೆಪಿ ಗೆಲ್ಲುವಂತೆ ಕಾರ್ಯಕರ್ತರು ಶ್ರಮ ವಹಿಸಿ ಹಳ್ಳಿಯಿಂದ ದೆಹಲಿಯವರೆಗೆ ಪಕ್ಷದ ಬಾವುಟ ಹಾರಿಸಬೇಕು ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ಜಾತಿ ಮತ ನೋಡದೆ ಕ್ರಿಯಾಶೀಲ ಹಾಗೂ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವಿರುವವರಿಗೆ ಮಣೆಹಾಕಬೇಕು. ಪಕ್ಷ ದ್ರೋಹ ಮಾಡಬೇಡಿ. ಅವಕಾಶ ಸಿಗದವರಿಗೆ ಮುಂದಿನ ಚುನಾವಣೆಗಳಲ್ಲಿ ಅವಕಾಶ ಸಿಗುವುದೆಂಬ ಆಶಾಭಾವ ಹೊಂದಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ಥನಾರಾಯಣ ಮಾತನಾಡಿ, ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಗೆಲುವಿಗಾಗಿ ಪಕ್ಷದ ವತಿಯಿಂದ 6 ಸಮಿತಿಗಳನ್ನು ರಚಿಸಿ ಪ್ರತಿಯೊಂದು ಸಮಿತಿಗೆ 5 ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ. ಪಂಚರತ್ನ ಹಾಗೂ ಪಂಚಸೂತ್ರದ ಯೋಜನೆಯೊಂದಿಗೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ಶಾಸಕ ಮುರುಗೇಶ ನಿರಾಣಿ, ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿದರು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ನಂದೀಶ, ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ರೈತಮೋರ್ಚಾ ಉಪಾಧ್ಯಕ್ಷ ಆರ್.ಟಿ. ಪಾಟೀಲ, ಎನ್.ಬಿ. ನಂದೀಶ, ಎಸ್.ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ಆರ್. ಕರೆಣ್ಣವರ, ನಗರಸಭೆ ಅಧ್ಯಕ್ಷ ಸಿದ್ದನಾಥ ಮಾನೆ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಳಲಿ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತ ತುಳಸಿಗೇರಿ, ನಗರ ಘಟಕದ ಅಧ್ಯಕ್ಷ ಡಾ.ರವಿ ನಂದಗಾವಿ, ರಾಜು ನಾಯ್ಕರ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಚ್. ಪಂಚಗಾಂವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಟಿ. ಉಪಾಧ್ಯಾಯ, ಜಿಲ್ಲಾ ಉಪಾಧ್ಯಕ್ಷ ಗುರುರಾಜ ಕಟ್ಟಿ ಇದ್ದರು.