ಮುದೇನೂರು: ಹೊನಗಡ್ಡಿ ಗ್ರಾಮದ ಜಿನುಗು ಕೆರೆಗೆ ಬೊಂಗಾ ಬಿದ್ದ ಸ್ಥಳಕ್ಕೆ ಕುಷ್ಟಗಿಯ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಎಇಇ ಸೂಗಪ್ಪ ಮಾತನಾಡಿ, ಪ್ರಸಕ್ತ ವರ್ಷ ಕೆರೆ ನಿರ್ವಹಣೆಗೆ 2.5 ಲಕ್ಷ ರೂ. ಬಿಡುಗಡೆಯಾಗಿದ್ದು, ಈಗಾಗಲೇ ಜಂಗಲ್ ಕಟಿಂಗ್ ಕಾರ್ಯ ಪ್ರಗತಿಯಲ್ಲಿದೆ. ಬೊಂಗಾ ಕಾಣಿಸಿಕೊಂಡು ನೀರು ಹರಿದುಹೋಗುತ್ತಿದ್ದು, ತ್ವರಿತ ಕ್ರಮ ಕೈಗೊಳ್ಳಲಾಗುವುದು. ಕೆರೆಯಲ್ಲಿ ಜಾಲಿಗಿಡಗಳು ಬೆಳೆದಿದ್ದು ಶೀಘ್ರ ತೆರವುಗೊಳಿಸಲಾಗುವುದು. ಕೆರೆಗೆ ನಾಮಫಲಕ ಅಳವಡಿಕೆ, ರಸ್ತೆ ದುರಸ್ತಿಗೊಳಿಸಲಾಗುವುದು. ಹೊಸದಾಗಿ ಕ್ರಿಯಾಯೋಜನೆ ರೂಪಿಸಿ ಮಾದರಿ ಕೆರೆ ನಿರ್ಮಾಣಕ್ಕೆ ಮುಂದಾಗಲಾಗುವುದು ಎಂದು ತಿಳಿಸಿದರು. ಇಲಾಖೆ ಜೆಇ ರಾಜಶೇಖರ್ ಕಟ್ಟಿಮನಿ, ರೈತ ಮುಖಂಡರಾದ ರಮೇಶ ಮ್ಯಾದನೇರಿ, ಅಮರೇಶ ಮರಕಟ್, ಸಂಗಪ್ಪ ಕಟಗಿಹಳ್ಳಿ, ವೀರೇಶ, ಹನುಮಂತಪ್ಪ ಮ್ಯಾದನೇರಿ ಇತರರಿದ್ದರು. ವಿಜಯವಾಣಿಯಲ್ಲಿ ನ.19 ರಂದು ‘ಹೊನಗಡ್ಡಿ ಗ್ರಾಮದ ಜಿನುಗು ಕೆರೆಗೆ ಬೊಂಗಾ’ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.