ಮುದೇನೂರು: ಪಾಲಕರು ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳಿಸದೇ, ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚು ಗಮನಹರಿಸಬೇಕು ಎಂದು ಬಿಆರ್ಪಿ ಶರಣಪ್ಪ ತುಮರಿಕೊಪ್ಪ ಹೇಳಿದರು.
ಎಂ.ರಾಂಪುರ ಗ್ರಾಮದ ಸರ್ಕಾರಿ ಕಿಪ್ರಾ ಶಾಲೆಯಲ್ಲಿ ಏರ್ಪಡಿಸಿದ್ದ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಸಮಗ್ರ ಕರ್ನಾಟಕ ಅಭಿಯಾನದಿಂದ ಸ್ಮಾರ್ಟ್ಕ್ಲಾಸ್ ಉದ್ಘಾಟನೆ, 5ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಬಿಸಿಯೂಟ, ಹಾಲು, ಸಮವಸ್ತ್ರ, ಪಠ್ಯ ಪುಸ್ತಕ, ಶೂ ನೀಡಲಾಗುತ್ತಿದೆ. ಆದ್ದರಿಂದ ಪಾಲಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಬೇಕು ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ನಿಂಗರಾಜ್ ಕಲ್ಲಭಾವಿ ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಪಂಪಯ್ಯ ಹಿರೇಮಠ , ಎಸ್ಡಿಎಂಸಿ ಅಧ್ಯಕ್ಷ ಹನುಮೇಶ ಕುಂಟೆಪ್ಪ ಕಲ್ಲಭಾವಿ, ಮೆಣೇಧಾಳ ಗ್ರಾಪಂ ಅಧ್ಯಕ್ಷ ದಾವಲ್ಸಾಬ್ ಅಂಕಸದೊಡ್ಡಿ, ತಾವರಗೇರಾ ವಲಯ ಶಿಕ್ಷಣ ಸಂಯೋಜಕ ರಾಘಪ್ಪ ಶ್ರೀರಾಮ್, ಮೆಣೇಧಾಳ ವಲಯದ ಸಿಆರ್ಪಿ ಶಶಿಕಾಂತ, ಬಿಆರ್ಪಿ ಲೋಕೇಶ, ಮುಖ್ಯಶಿಕ್ಷಕ ರಾಜು ರಾಠೋಡ್, ಪ್ರಮುಖರಾದ ಶಿವಮೂರ್ತಿ ಹೊಳೇಗೌಡ್ರ, ಬಸವರಾಜ ಬಲಕುಂದಿ, ರುದ್ರೇಶ ಬೂದಿಹಾಳ, ಗ್ರಾಪಂ ಪಿಡಿಒ ಹನುಮಂತರಾಯ ಅಮರಾಪುರ ಇತರರಿದ್ದರು.