ಮುದ್ದೇಬಿಹಾಳ: ಕೂಲಿ ಕಾರ್ಮಿಕ ದಂಪತಿಯನ್ನು ಮಾರಕಾಸಗಳಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮುದ್ನಾಳ ಗ್ರಾಮದ ಹೊರವಲಯದಲ್ಲಿ ನ.15ರಂದೇ ನಡೆದಿದ್ದು, ಎರಡು ದಿನಗಳ ಬಳಿಕ ಬೆಳಕಿಗೆ ಬಂದಿದೆ.
ನಾರಾಯಣಪುರ ಸಮೀಪದ ಬಸರಿಗಿಡ ತಾಂಡಾದ ಶಾಂತಿಲಾಲ್ ದೇವಲಪ್ಪ ರಾಠೋಡ (50) ಹಾಗೂ ಆತನ ಪತ್ನಿ ರುಕ್ಮಿಣಿ ರಾಠೋಡ(45) ಕೊಲೆಯಾಗಿರುವ ದುರ್ದೈವಿಗಳು.
ಮುದ್ನಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಒಂದೂವರೆ ವರ್ಷದಿಂದ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಹೊಲದಲ್ಲಿ ಶೆಡ್ ಹಾಕಿಕೊಂಡು ವಾಸವಾಗಿದ್ದ ದಂಪತಿಯನ್ನು ಯಾರೋ ಅಪರಿಚಿತರು ಹರಿತವಾದ ಮಾರಕಾಸ್ತ್ರದಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ದಂಪತಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸ್ಪಿ ಅನುಪಮ್ ಅಗರವಾಲ್, ಡಿಎಸ್ಪಿ ಟಿ.ಎಸ್. ಸುಲ್ಪಿ, ಸಿಪಿಐ ಆನಂದ ವಾಘಮೋಡೆ, ಪಿಎಸ್ಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.