ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಕೆಬಿಜೆಎನ್ಎಲ್ನಿಂದ ನಿರ್ಮಾಣಗೊಂಡಿರುವ ಉಪಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಸುತ್ತಮುತ್ತಲಿನ ರೈತರ ಜಮೀನುಗಳಿಗೆ ನುಗ್ಗಿದೆ.
ಕಾಲುವೆ ಪಕ್ಕದಲ್ಲಿರುವ ಗ್ರಾಮದ ವೀರಭದ್ರಯ್ಯ ಮಠ ಅವರ ಹೊಲದ ಹತ್ತಿರವಿರುವ ಕೆನಾಲ್ನ್ನು ಕಳೆದ ಐದು ದಿನಗಳ ಹಿಂದೆ ಏಕಾಏಕಿ ಒಡೆದು ನೀರು ಹರಿಬಿಡಲಾಗಿದೆ. ಇದರಿಂದ ಢವಳಗಿ ರಸ್ತೆ ಸಂಪೂರ್ಣ ಹಾಳಾಗಿ ತಮ್ಮ ಜಮೀನುಗಳಿಗೆ ಅಡ್ಡಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ದೂರಿದ್ದಾರೆ.
*ಕುಂಟೋಜಿ ಗ್ರಾಮದ ಸರ್ವೇ ನಂ.369/1,369/2,369/3,369/4ರಲ್ಲಿ ಬರುವ ಇಪ್ಪತ್ತು ಎಕರೆ ಜಮೀನಿನಲ್ಲಿ ತೊಗರಿ ಬೆಳೆ ಸಂಪೂರ್ಣ ನೀರಿನಿಂದ ಜಲಾವೃತವಾಗಿದ್ದು, ರೈತರಾದ ಸಂಗಮ್ಮ ಹೆಬ್ಬಾಳ, ಮಳೆಪ್ಪಗೌಡ ಬಿರಾದಾರ, ಗಣೇಶ ಹೆಬ್ಬಾಳ, ಸಿದ್ದು ಹೆಬ್ಬಾಳ ಅವರಿಗೆ ಸೇರಿದ ಜಮೀನಿನ ಬೆಳೆ ಸಂಪೂರ್ಣ ಕೊಳೆಯುವ ಹಂತಕ್ಕೆ ಬಂದಿದೆ.
ಕುಂಟೋಜಿ ಗ್ರಾಮದ ರೈತ ಸಿದ್ದು ಹೆಬ್ಬಾಳ ಮಾತನಾಡಿ, ಕೆಬಿಜೆಎನ್ಎಲ್ ಅಧಿಕಾರಿಗಳ ಬೇಜವಾಬ್ದಾರಿತನದ ನಿರ್ಧಾರವೇ ಈ ಪರಿಸ್ಥಿತಿಗೆ ಕಾರಣವಾಗಿದೆ. ಹಾಳಾಗಿರುವ ರಸ್ತೆ ಕುರಿತು ಮತ್ತು ತೊಗರಿ ಬೆಳೆ ಹಾಳಾಗಿರುವ ಬಗ್ಗೆಯೂ ರೈತರೆಲ್ಲರೂ ಈಗಾಗಲೇ ಕೃಷಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಕೆಬಿಜೆಎನ್ಎಲ್ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನೀರಾವರಿ ಮಾಡುತ್ತೇವೆ ಎಂದು ಹೇಳುವ ಜಿಲ್ಲೆಯ ಜನಪ್ರತಿನಿಧಿಗಳು ರೈತರ ಜಮೀನಿನಲ್ಲಿ ಹೀಗೆ ನೀರು ನಿಂತು ಬೆಳೆ ಸರ್ವನಾಶವಾದರೆ ಅದಕ್ಕೆ ಯಾರನ್ನು ಹೊಣೆಯನ್ನಾಗಿ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಹಾಳಾಗಿರುವ ಬೆಳೆಗೆ ಸರ್ಕಾರ, ಕೆಬಿಜೆಎನ್ಎಲ್ ಮೂಲಕ ಪರಿಹಾರ ಕೊಡಿಸಬೇಕು ಎಂದವರು ಒತ್ತಾಯಿಸಿದ್ದಾರೆ.
ಗ್ರಾಮದ ರೈತರಾದ ಬಸಯ್ಯ ಮಠ, ಚನ್ನಬಸಯ್ಯ ಮಠ, ಸುಭಾಸ ಅಂಗಡಿ, ಬಸವರಾಜ ನಡುವಿನಮನಿ, ಬಸವರಾಜ ಕೋಲಕಾರ ಮೊದಲಾದವರು ಅಧಿಕಾರಿಗಳ ನಿರ್ಲಕ್ಷ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂಟೋಜಿ ಗ್ರಾಮದಲ್ಲಿ ಕಾಲುವೆ ಒಡೆದು ಜಮೀನಿಗೆ ನೀರು ನುಗ್ಗಿರುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಕರೆಸಿ ಪರಿಶೀಲನೆ ನಡೆಸಲಾಗುವುದು. ಬೆಳೆ ಹಾನಿ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇನೆ.
ಜಿ.ಎಸ್. ಮಳಗಿ, ತಹಸೀಲ್ದಾರ್
ಮೂಲಗಳ ಪ್ರಕಾರ ಜಮ್ಮಲದಿನ್ನಿ ಬಳಿ ಬರುವ ದೊಡ್ಡ ಕಾಲುವೆಗೆ ಸಂಪರ್ಕ ಇರುವ ಈ ಉಪ ಕಾಲವೆಯಿಂದ ನೀರು ರೈತರ ಜಮೀನಿಗೆ ಹೋಗುತ್ತಿದೆ. ಇದೇ ಕಾಲುವೆಯಲ್ಲಿ ಹೂಳು ತುಂಬಿ ನೀರು ಹಿಂದಿನ ಗ್ರಾಮಗಳ ರೈತರ ಜಮೀನುಗಳಲ್ಲಿ ನುಗ್ಗಿರುವ ಸಾಧ್ಯತೆ ಇದ್ದು ಯಾರೋ ರೈತರೇ ಈ ಉಪ ಕಾಲುವೆ ಒಡೆದಿದ್ದಾರೆಯೋ ಅಥವಾ ಅಧಿಕಾರಿಗಳು ಒಡೆದಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು. ಬೇಕಾಬಿಟ್ಟಿಯಾಗಿ ಉಪ ಕಾಲುವೆಗಳನ್ನು ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿಸುವುದುನ್ನು ತಪ್ಪಿಸಬೇಕು ಎಂಬ ಆಗ್ರಹವನ್ನು ರೈತರು ಮಾಡಿದ್ದಾರೆ.