ಮುದ್ದೇಬಿಹಾಳ: ಕನ್ನಡ ಭಾಷೆ ತಲೆ ಎತ್ತಿ ಮೆರೆಯುತ್ತಿದೆ ಎಂದರೆ ಅದಕ್ಕೆ ಕಾರಣ ಕೇವಲ ಉತ್ತರ ಕರ್ನಾಟಕ ಆಗಿದೆ ಎಂದು ಚಿತ್ರನಟ ವಿಜಯ್ ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ನಿರ್ದೇಶಕ ಕಲಂದರ್ ದೊಡಮನಿ, ಸಿಂದಗಿ ರಂಗ ಸಾರಂಗ ಕಲಾ ವೇದಿಕೆ ಸಹಕಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲಾಜಾತ್ರೆ ಕಾರ್ಯಕ್ರಮದಲ್ಲಿ ‘ಮಾಲ್ಗುಡಿ ಡೇಸ್’ ಚಿತ್ರದ ಪ್ರಚಾರಾರ್ಥವಾಗಿ ಅವರು ಮಾತನಾಡಿದರು.
ಕನ್ನಡ ಭಾಷೆಯಲ್ಲಿ ಸೊಗಡು ತುಂಬಿದೆ. ಪ್ರೀತಿ ಹಾಗೂ ತಾಕತ್ತು ಇದೆ ಎಂಬುದಕ್ಕೆ ನೀವೇ ಸಾಕ್ಷಿಯಾಗಿದ್ದೀರಿ ಎಂದು ಪ್ರೇಕ್ಷಕರನ್ನುದ್ದೇಶಿಸಿ ಹೇಳಿದರು. ಒಳ್ಳೆಯ ಸಿನಿಮಾ ಮಾಡಬೇಕೆಂದು ಕಾಯುತ್ತಿದ್ದಾಗ ‘ಮಾಲ್ಗುಡಿ ಡೇಸ್’ ಚಿತ್ರದ ಕಥೆ ಸಿಕ್ಕಿತು. ಅದನ್ನು ನೋಡಿಕೊಂಡು ನಟನೆ ಮಾಡಿದ್ದೇನೆ. ಈ ಚಿತ್ರ ನಿಮಗೆ ಇಷ್ಟವಾದರೆ ನಿಮ್ಮ ಅಕ್ಕಪಕ್ಕದವರಿಗೂ ಹೇಳಿ, ಚಿತ್ರ ವೀಕ್ಷಿಸಿ ಹಾರೈಸಿ ಎಂದು ಮನವಿ ಮಾಡಿದರು.
ಖ್ಯಾತ ನಿರೂಪಕಿ ಅನುಶ್ರೀ ಮಾತನಾಡಿ, ಉತ್ತರ ಕರ್ನಾಟಕದ ಜನರ ಭಾಷೆಯೇ ಸವಿಯಾಗಿದ್ದು, ಈ ಭಾಗದ ಜನರ ಪ್ರೀತಿ ವಿಶ್ವಾಸ ಅವಿಸ್ಮರಣೀಯ ಎಂದರು.
ಕಿರುತೆರೆಯ ಜೊತೆ ಜೊತೆಯಲಿ ಧಾರಾವಾಹಿ ಕಲಾವಿದೆ ಅನು, ಝಿ ಕನ್ನಡದ ಸರಿಗಮಪ ಖ್ಯಾತಿಯ ಹಣಮಂತ ಲಮಾಣಿ, ಜ್ಞಾನಾ, ಮಹನ್ಯಾ, ಮಹಾಲಕ್ಷ್ಮೀ, ಕಾಮಿಡಿ ಕಿಲಾಡಿ ಖ್ಯಾತಿಯ ಶಿವಾನಂದ, ಅಪ್ಪಣ್ಣ, ಸೂರಜ್, ಮಿಂಚು, ಸದಾನಂದ, ವಾಣಿ, ಜ್ಯೂನಿಯರ್ ಅಂಬರೀಷ್, ಮಿಮಿಕ್ರಿ ಗೋಪಿ ಮತ್ತಿತರರು ಹಾಡು, ಹಾಸ್ಯ ಹಾಗೂ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮ ಉದ್ಘಾಟನೆ
ಕಲಾಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುನ್ನ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಚಾಲನೆ ನೀಡಿದರು. ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಜಿ. ಪಾಟೀಲ ಶೃಂಗಾರಗೌಡ್ರು, ಕುರುಬರ ಸಂಘದ ತಾಲೂಕಾಧ್ಯಕ್ಷ ಎಂ.ಎನ್. ಮದರಿ, ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ಶಾಸಕರ ಸಹೋದರ ಸೋಮನಗೌಡ ಪಾಟೀಲ ನಡಹಳ್ಳಿ, ಕಸಾಪ ಅಧ್ಯಕ್ಷ ಎಂ.ಬಿ. ನಾವದಗಿ, ಶಿವಶಂಕರಗೌಡ ಹಿರೇಗೌಡರ, ಅರವಿಂದ ಜಮಖಂಡಿ, ಪ್ರಭಾರ ಬಿಇಒ ರೇಣುಕಾ ಕಲ್ಬುರ್ಗಿ, ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ ಸಮಾರಂಭಕ್ಕೆ ಚಾಲನೆ ನೀಡಿದರು.