ಮುದಗಲ್: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಬೇಕು ಎಂದು ಆಗ್ರಹಿಸಿ ಕಾರ್ಮಿಕರು ಸಲಕೆ, ಬುಟ್ಟಿ ಹಿಡಿದುಕೊಂಡು ಹಲಗೆ ಬಾರಿಸುತ್ತ ಹಲಕಾವಟಗಿ ಗ್ರಾಪಂ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದರು.
ಇದನ್ನೂ ಓದಿರಿ: ನರೇಗಾ ಕೂಲಿ ಕೆಲಸ ನ್ನೂ 50 ದಿನ ಹೆಚ್ಚಿಸಲು ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಜಾರಿ ಸಮಿತಿ ಆಗ್ರಹ
ಅಂಕನಾಳ ಮತ್ತು ಉಪನಾಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅಧಿಕಾರಿಗಳು ಸರಿಯಾಗಿ ಕೆಲಸ ನೀಡುತ್ತಿಲ್ಲ. 14 ದಿನಗಳಲ್ಲಿ 9ರಿಂದ 10 ದಿನ ಕೆಲಸ ನೀಡಲಾಗಿದೆ. ಕೃಷ್ಣಾ ನದಿ ದಡದಲ್ಲಿ ಜಂಗಲ್ ಕಟಿಂಗ್ ಮತ್ತು ಹೂಳು ತೆಗೆಯುವ ಕೆಲಸ ಆರಂಭಿಸಲಾಗಿತ್ತು. ಆದರೆ, ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಂಡಿದೆ. ಅಧಿಕಾರಿಗಳು ಬೇರೆ ಸ್ಥಳದಲ್ಲಿ ಕೆಲಸ ಮಾಡಿಸುತ್ತಿಲ್ಲ ಎಂದು ದೂರಿದರು.
ಎನ್ಎಂಆರ್ನಂತೆ ಪೂರ್ತಿ ದಿನ ಕೆಲಸ ನೀಡಬೇಕು ಕಾರ್ಮಿಕರು ಒತ್ತಾಯಿಸಿದರು. ಪಿಡಿಒ ಪ್ರೇಮಾ ರಾಠೋಡ್ ಮಾತನಾಡಿ, ಕೂಲಿಕಾರರಿಗೆ ಕೆಲಸ ನೀಡುವುದಕ್ಕೆ ಯಾವುದೇ ತೊಂದರೆ ಇಲ್ಲ. ದುಡಿಯುವವರಿಗೆ ಕೆಲಸ ನೀಡುವುದಾಗಿ ಭರವಸೆ ನೀಡಿದರು.
ಕೂಡಲೇ ಕೂಲಿ ಕಾರ್ಮಿಕರಿಗೆ ಬೇರೆ ಕಡೆ ಕೆಲ ಮಾಡಲು ಅವಕಾಶ ಕಲ್ಪಿಸಿದರು. ಕೂಲಿಕಾರರಾದ ಶಾವಮ್ಮ, ಪ್ರಭು, ಹನುಮಪ್ಪ ಕೌಜಗನೂರು, ಏಕಾನಂದಯ್ಯ, ಮಂಜುನಾಥ ಅಡವಿಹಾಳ, ಹುಲಿಗೆಮ್ಮ ಇತರರಿದ್ದರು.