ಹೊಸಕೋಟೆ: ನಿರೀಕ್ಷೆಯಂತೆಯೇ ಹೊಸಕೋಟೆಯಲ್ಲಿ ಜಿದ್ದಾಜಿದ್ದಿನ ಚುನಾವಣಾ ಕಣ ರಂಗೇರಿದೆ. ಪ್ರಬಲ ರಾಜಕೀಯ ಎದುರಾಳಿಗಳಾದ ಎಂಟಿಬಿ ನಾಗರಾಜ್ ಹಾಗೂ ಶರತ್ಬಚ್ಚೇಗೌಡ ನಡುವಿನ ವಾಕ್ಸಮರ ತಾರಕ್ಕೇರುವ ನಡುವೆ ಉಭಯ ನಾಯಕರು ನಾಲಿಗೆ ಹರಿಬಿಡುತ್ತಿದ್ದಾರೆ, ಏತನ್ಯಧ್ಯೆ ಶುಕ್ರವಾರ ಶಾಸಕ ಶರತ್ ಬಚ್ಚೇಗೌಡರನ್ನು ಗುಳ್ಳೆನರಿಗೆ ಹೋಲಿಸಿ ಎಂಟಿಬಿ ಕಿಡಿಕಾರಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪುತ್ರನಿಗೆ ಟಿಕೆಟ್ ಕೊಡಿಸುವ ವಿಫಲಯತ್ನದ ಬಳಿಕ ವರಿಷ್ಟರ ಅಣತಿಯಂತೆ ಚುನಾವಣಾ ಕಣದಲ್ಲಿ ತೊಡೆತಟ್ಟಿ ನಿಂತಿರುವ ಎಂಟಿಬಿ ನಾಗರಾಜ್ ಶುಕ್ರವಾರದಿಂದ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಹೊಸಕೋಟೆಯ ದಳಸಗೆರೆ ಗ್ರಾಮದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಪ್ರಾರಂಭಿಸಿದ ಎಂಟಿಬಿ ನೇರವಾಗಿ ಪ್ರತಿಸ್ಪರ್ಧಿ ಶರತ್ಬಚ್ಚೇಗೌಡ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ನಾಗಲೋಕ ಎಲ್ಲಿ? ಗುಳ್ಳೆನರಿ ಎಲ್ಲಿ?
ಹೊಸಕೋಟೆಯಲ್ಲಿ ಸಿಎಂ ಬೊಮ್ಮಾಯಿಯಾಗಲಿ ಅಥವಾ ಪ್ರಧಾನಿ ಮೋದಿಯೇ ಆಗಲಿ ಕಣಕ್ಕಿಳಿದರೂ ಗೆಲ್ಲೋದು ಕಾಂಗ್ರೆಸ್ ಹೊರತು ಬಿಜೆಪಿಯಲ್ಲ ಎಂದು ಚುನಾವಣಾ ಪ್ರಚಾರದ ವೇಳೆ ಶಾಸಕ ಶರತ್ಬಚ್ಚೇಗೌಡ ಸವಾಲು ಹಾಕಿದ್ದರು.
ಇದಕ್ಕೆ ಪ್ರತಿಯಾಗಿ ಎಂಟಿಬಿ ನಾಗಲೋಕ ಎಲ್ಲಿ? ಗುಳ್ಳೆ ನರಿ ಎಲ್ಲಿ? ನಾಗಲೋಕಕ್ಕೆ ಗುಳ್ಳೆ ನರಿ ಹೋಲಿಕೆ ಮಾಡಲು ಸಾಧ್ಯವೇ ಎಂದು ಏರು ಧ್ವನಿಯಲ್ಲೇ ಮಾತನಾಡುವ ಮೂಲಕ ಟಾಂಗ್ ಕೊಟ್ಟಿದ್ದರು.
ಇದನ್ನೂ ಓದಿ: ಪ್ರತಿಪಕ್ಷ ಕಾಂಗ್ರೆಸ್ನಲ್ಲಿ 60 ಕ್ಷೇತ್ರಕ್ಕೆ ಅಭ್ಯರ್ಥಿಗಳಿಲ್ಲ: ಸಿಎಂ ಬೊಮ್ಮಾಯಿ ಲೇವಡಿ
ಪ್ರಧಾನಿ ಮೋದಿ ವಿಶ್ವ ಮೆಚ್ಚಿದ ನಾಯಕ, 130 ಕೋಟಿ ಜನ ಮೆಚ್ಚಿದ ನಾಯಕ. ತಾನೊಬ್ಬ ಜನಪ್ರತಿನಿಧಿ ಅನ್ನೋದು ಮರೆತು ಪ್ರಧಾನಿಯನ್ನು ಮೊದಲಿಸಿದ್ದಾರೆ. ಇದಕ್ಕೆಲ್ಲ ಈ ಬಾರಿಯ ಚುನಾವಣೆಯಲ್ಲಿ ಜನರೇ ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಇದು ನನ್ನ ಕೊನೆ ಚುನಾವಣೆ
ಇದು ನನ್ನ ಕೊನೇ ಚುನಾವಣೆಯೆಂದೇ ಚುನಾವಣಾ ಅಖಾಡಕ್ಕಿಳಿದಿರುವ ಎಂಟಿಬಿ ನಾಗರಾಜ್ ನಾನು 6 ತಿಂಗಳ ಹಿಂದೆಯೇ ರಾಜಕೀಯ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದೆ. ಈ ಬಗ್ಗೆ ಹೈಕಮಾಂಡ್ಗೆ ತಿಳಿಸಿದ್ದೆ. ಇದಕ್ಕೆ ರಾಜ್ಯ ನಾಯಕರೂ ಸಮ್ಮತಿಸಿದ್ದರು. ಆದರೆ ಹೈಕಮಾಂಡ್ ಈ ಬಾರಿ ಮತ್ತೆ ಸ್ಪರ್ಧಿಸುವಂತೆ ಅಣತಿ ಮಾಡಿತು.
ಮಗನಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಕಲ್ಪಿಸೋಣ ಎಂದು ಭರವಸೆ ನೀಡಿತು.ಈ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣಾ ಕಣಕ್ಕೆ ಇಳಿದಿದ್ದೇನೆ. ಈಗಾಗಲೇ 6 ಚುನಾವಣೆ ಎದುರಿಸಿದ್ದು ಶಾಸಕ ಹಾಗೂ ಮಂತ್ರಿಐಆಗಿ ಸೇವೆ ಸಲ್ಲಸಿದ್ದೇನೆ.
19 ವರ್ಷ ಹೊಸಕೋಟೆ ಅಭಿವೃದ್ಧಿಗಾಗಿ ದುಡಿದಿದ್ದೇನೆ, ಇದು ನನ್ನ ಕೊನೇ ಚುನಾವಣೆಯಾಗಿದ್ದು ಕೆಲವೊಂದು ಯೋಜನೆಗಳ ಸಾಕಾರಕ್ಕೆ ಅವಕಾಶ ಸಿಗುವ ನಿರೀಕ್ಷೆಯಲ್ಲಿ ಮತಭಿಕ್ಷೆಗೆ ಹೊರಟಿದ್ದೇನೆ ಎಂದು ಸಚಿವ ಎಂ.ಟಿ.ಬಿ.ನಾಗರಾಜ್ ಭಾವನಾತ್ಮಕವಾಗಿ ಮಾತನಾಡಿದ್ದಾರೆ.