ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ನಲ್ಲಿ 60 ಸೀಟ್ ಗಳಿಗೆ ಅಭ್ಯರ್ಥಿಗಳ ಗತಿ ಇಲ್ಲ. ಇದರಿಂದಾಗಿ ಬೇರೆ ಪಕ್ಷದ ಅಸಮಾಧಾನಿತರು ಬರಬಹುದು ಎಂದು ಕಾದು ಕುಳಿತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿಯಾಡಿದ್ದಾರೆ.
ರೇಸ್ ಕೋರ್ಸ್ ನಿವಾಸದ ಬಳಿ ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಟಿಕೆಟ್ ಸಿಗದ ಕಾರಣಕ್ಕೆ ಬೇಸರ, ಅಸಮಾಧಾನಗೊಂಡವರನ್ನು ಮನವೊಲಿಸಿ ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಆದರೂ ರಾಜಕೀಯ ಮಹತ್ವಾಕಾಂಕ್ಷೆ ಉಳ್ಳವರು ಪಕ್ಷ ತೊರೆಯಲು ಪ್ರಯತ್ನಿಸುತ್ತಿದ್ದಾರೆ.
ಲಕ್ಷ್ಮಣ ಸವದಿ ಕಾಂಗ್ರೆಸ್ಗೆ ಹೋಗ್ತಿರೋದು ದುಃಖ ತರಿಸಿದೆ
ಬಹು ವರ್ಷಗಳ ಒಡನಾಡಿ ಲಕ್ಷ್ಮಣ ಸವದಿ ನಮ್ಮಿಂದ ದೂರವಾಗಿ ಕಾಂಗ್ರೆಸ್ ಸೇರುತ್ತಿರುವುದಕ್ಕೆ ದುಃಖವಾಗುತ್ತಿದೆ. ಸಾಕಷ್ಟು ಪ್ರಯತ್ನಿಸಿದರೂ ತಮ್ಮ ನಿರ್ಧಾರಕ್ಕೆ ಅಂಟಿಕೊಂಡರು. ಬಹುಶಃ ರಾಜಕೀಯ ಭವಿಷ್ಯ ಅರಸಿ ಅಲ್ಲಿಗೆ ಹೋಗಿರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಲಕ್ಷ್ಮಣ ಸವದಿ ಕಾಂಗ್ರೆಸ್ಗೆ ಹೋಗ್ತಿರೋದು ದುಃಖ ತರಿಸಿದೆ; ಸಿಎಂ ಬೊಮ್ಮಾಯಿ
ಆಡಳಿತ ಪಕ್ಷ, ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವಾದ ಕಾರಣ ಟಿಕೆಟ್ ಗೆ ಪೈಪೋಟಿ ಹೆಚ್ಚಿದೆ. ಆಕಾಂಕ್ಷಿಗಳ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಶಾಸಕರಾಗಬೇಕು ಎಂಬ ಮಹತ್ವಾಕಾಂಕ್ಷೆಯ ಕೆಲ ನಾಯಕರು ಪಕ್ಷ ಬಿಟ್ಟಿದ್ದಾರೆ. ಆದರೆ ಲಕ್ಷಾಂತರ ಕಾರ್ಯಕರ್ತರು ಪಕ್ಷದ ಜತೆಗಿದ್ದಾರೆ. ಇದರಿಂದಾಗಿ ಯಾವುದೇ ಸಮಸ್ಯೆಯಿಲ್ಲ ಎಂದಿದ್ದಾರೆ.
ನಾಳೆ ನಾಮಪತ್ರ ಸಲ್ಲಿಕೆ
ನಾಳೆ ಒಳ್ಳೆಯ ದಿನ ಎನ್ನುವುದಕ್ಕಾಗಿ ಸಾಂಕೇತಿಕ ನಾಮಪತ್ರ ಸಲ್ಲಿಸುವೆ. ಏ.19ಕ್ಕೆ ಬೃಹತ್ ಸಮಾವೇಶ ನಡೆಸಿ ನಾಮಪತ್ರ ಸಲ್ಲಿಸಲಿರುವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.