ನವದೆಹಲಿ: ನಿವೃತ್ತಿ ನಂತರದಲ್ಲಿ ಧೋನಿ ಕೋಚ್ ಆಗುವರೇ, ಉದ್ಯಮದಲ್ಲಿ ಇನ್ನಷ್ಟು ಹೆಚ್ಚು ತೊಡಗಿಕೊಳ್ಳುವರೇ ಅಥವಾ ರಾಜಕೀಯದತ್ತ ಒಲವು ತೋರುವರೇ ಎಂಬ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಉತ್ತರ ನೀಡಿರುವ ಧೋನಿ ಅವರ ಆತ್ಮೀಯ ಗೆಳೆಯ ಹಾಗೂ ಉದ್ಯಮ ಪಾಲುದಾರ ಅರುಣ್ ಪಾಂಡೆ, ಧೋನಿ ಭಾರತೀಯ ಸೇನೆಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿದ್ದಾರೆ ಎಂದಿದ್ದಾರೆ.
ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿ, ಕಳೆದ ವರ್ಷ ವಿಶ್ವಕಪ್ ನಂತರದಲ್ಲಿ ಒಂದು ತಿಂಗಳ ಕಾಲ ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರದಲ್ಲಿ ಬ್ರಾಂಡ್ ಮೌಲ್ಯ ಕಡಿಮೆಯಾಗುವ ಬಗ್ಗೆ ಧೋನಿ ತಲೆಕೆಡಿಸಿಕೊಂಡಿಲ್ಲ ಎಂದು ಪಾಂಡೆ ತಿಳಿಸಿದ್ದಾರೆ. ಕಳೆದ ವರ್ಷ ವಿಶ್ವಕಪ್ ನಂತರದಲ್ಲಿ ಧೋನಿ 10 ಹೊಸ ಬ್ರಾಂಡ್ಗಳ ಪ್ರಚಾರಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಹೀಗಾಗಿ ಧೋನಿ ಕ್ರಿಕೆಟ್ ಆಡುತ್ತಿರಲಿ, ಆಡದೇ ಇರಲಿ ಅವರು ಯವಾಗಲೂ ಯುವಕರ ಐಕಾನ್ ಆಗಿರುತ್ತಾರೆ ಎಂದು ಅರುಣ್ ಪಾಂಡೆ ವಿವರಿಸಿದ್ದಾರೆ.
ಇದನ್ನೂ ಓದಿ: ಸುರೇಶ್ ರೈನಾ ನಿವೃತ್ತಿಗೆ ಪತ್ನಿ ಪ್ರಿಯಾಂಕಾ ಭಾವನಾತ್ಮಕ ಸಂದೇಶ
ಟಿ20 ವಿಶ್ವಕಪ್ ಮುಂದೂಡಿಕೆ ಖಂಡಿತವಾಗಿಯೂ ಅವರ ನಿವೃತ್ತಿ ನಿರ್ಧಾರದ ಮೇಲೆ ಪರಿಣಾಮ ಬೀರಿದೆ ಎಂದೂ ತಿಳಿಸಿದ್ದಾರೆ. ಧೋನಿ ಇನ್ನು ಕೆಲ ವರ್ಷಗಳ ಕಾಲ ಐಪಿಎಲ್ನಲ್ಲಿ ಆಡಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವುದರಿಂದ ಅವರು ಮಾನಸಿಕವಾಗಿ ಹೆಚ್ಚು ಸ್ವತಂತ್ರರಾಗಿದ್ದಾರೆ ಎಂದು ಅರುಣ್ ಪಾಂಡೆ ತಿಳಿಸಿದ್ದಾರೆ.