ಲಖನೌ: ಬಿಎಸ್ಪಿ ಸಂಸದ ಅತುಲ್ ರಾಯ್ ನನ್ನ ಮೇಲೆ ರೇಪ್ ಮಾಡಿದ್ದಾರೆಂದು ಆರೋಪಿಸಿದ್ದ ಪೂರ್ವ ಉತ್ತರ ಪ್ರದೇಶ ಮೂಲದ 24 ವರ್ಷದ ಯುವತಿ ಕಳೆದ ವಾರ ಸುಪ್ರೀಂಕೋರ್ಟ್ ಹೊರಭಾಗದ ಗೇಟ್ ಮುಂದೆ ಬೆಂಕಿ ಹಂಚಿಕೊಂಡಿದ್ದಳು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ದೆಹಲಿ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾಳೆ.
2019ರಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ಸಂಸದ ಅತುಲ್ ರಾಯ್ ವಿರುದ್ಧ ವಾರಣಾಸಿಯಲ್ಲಿ ದೂರು ದಾಖಲಿಸಿದ್ದಳು. ಸಂತ್ರಸ್ತೆ ಸಾವಿಗೂ ಮುನ್ನ ವಾರಣಾಸಿ ಪೊಲೀಸರು ಜೈಲಿನಲ್ಲಿರುವ ಸಂಸದ ಮತ್ತು ಆತನ ಸಂಬಂಧಿಕರಿಗೆ ಸಹಕರಿಸುತ್ತಿದ್ದಾರೆಂದು ಆರೋಪ ಮಾಡಿದ್ದಾಳೆ.
ಯುವತಿಯ ಬಾಯ್ಫ್ರೆಂಡ್ ಕೂಡ ಕಳೆದ ವಾರ ಆಕೆಯ ಜತೆಯಲ್ಲೇ ಬೆಂಕಿ ಹಚ್ಚಿಕೊಂಡಿದ್ದ. ಸಂತ್ರಸ್ತೆಗೆ ಶೇ. 85 ರಷ್ಟು ಹಾಗೂ 27 ವರ್ಷದ ಆಕೆಯ ಬಾಯ್ಫ್ರೆಂಡ್ ಶೇ. 65 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದರು. ಇಬ್ಬರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರಗೆ ದಾಖಲಿಸಲಾಗಿತ್ತು. ಬಾಯ್ಫ್ರೆಂಡ್ ಕಳೆದ ಶನಿವಾರ ಮೃತಪಟ್ಟರೆ, ಸಂತ್ರಸ್ತ ಯುವತಿ ನಿನ್ನೆ (ಆಗಸ್ಟ್ 24) ಕೊನೆಯುಸಿರೆಳೆದಿದ್ದಾಳೆ.
2020ರ ನವೆಂಬರ್ನಲ್ಲಿ ಬಿಎಸ್ಪಿ ಸಂಸದನ ಸಹೋದರರು ಸಂತ್ರಸ್ತೆಯ ವಿರುದ್ಧ ವಾರಣಾಸಿಯಲ್ಲಿ ಫೋರ್ಜರಿ ಪ್ರಕರಣ ದಾಖಲಿಸಿದ್ದರು. ಆಕೆಯನ್ನು ಪತ್ತೆ ಮಾಡಲು ಆಗುತ್ತಿಲ್ಲ ಎಂದು ಪೊಲೀಸರು ಪದೇ ಪದೆ ಕೋರ್ಟ್ ಮುಂದೆ ಪ್ರಸ್ತಾಪ ಮಾಡಿದ್ದಕ್ಕೆ, ಕೊನೆಗೆ ಈ ತಿಂಗಳ ಆರಂಭದಲ್ಲಿ ಯುವತಿಯ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.
ಇದರ ನಡುವೆ ಸಂತ್ರಸ್ತೆ ತನ್ನ ಬಾಯ್ಫ್ರೆಂಡ್ ಜತೆ ದೆಹಲಿಗೆ ಪ್ರಯಾಣ ಬೆಳೆಸಿ ಆಗಸ್ಟ್ 16ರಂದು ತಮಗೆ ತಾವೇ ಬೆಂಕಿ ಹಚ್ಚಿಕೊಳ್ಳುವ ಮುನ್ನ ಫೇಸ್ಬುಕ್ ಲೈವ್ ವಿಡಿಯೋ ಮಾಡಿದ್ದರು. ವಾರಾಣಸಿ ಪೊಲೀಸರು ಸಂಸದ ಮತ್ತು ಆತನ ಸಂಬಂಧಿಕರಿಗೆ ಸಹಕಾರ ನೀಡುತ್ತಿದ್ದಾರೆ. ನಮ್ಮಿಬ್ಬರಿಗೂ ಯಾವುದೇ ನ್ಯಾಯ ದೊರೆಯಲಿಲ್ಲ ಎಂದು ಹೇಳಿದರು.
ಬಂಧನ ವಾರಂಟ್ಗಳ ಬಗ್ಗೆ ಮಾತನಾಡಿದ ಆಕೆ, ಅವುಗಳನ್ನು ಬಲ್ಲಿಯಾ ಮತ್ತು ವಾರಣಾಸಿ ಎರಡು ವಿಭಿನ್ನ ಸ್ಥಳಗಳಿಂದ ಹೊರಡಿಸಲಾಗಿದೆ. ಅವರು ಬಯಸಿದ ಅಂತ್ಯವನ್ನು ನಾವು ತಲುಪಿದ್ದೇವೆ. ಎರಡು ವರ್ಷಗಳಿಂದ ಇದಕ್ಕಾಗಿ ಅವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರು. ಅವರ ಗುರಿಯನ್ನು ಅರ್ಥ ಮಾಡಿಸಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ತಾವು ಎಲ್ಲಿಂದ ಲೈವ್ ಮಾಡುತ್ತಿದ್ದೇವೆ ಎಂಬುದನ್ನು ಬಹಿರಂಗಪಡಿಸದೇ ಸಾವಿನ ಬಗ್ಗೆ ಸಂತ್ರಸ್ತೆ ಮಾತನಾಡಿದ್ದಳು.
ಸಂತ್ರಸ್ತೆಯ ಬಾಯ್ಫ್ರೆಂಡ್ ಮಾತನಾಡಿ, ನವೆಂಬರ್ 2020ರಿಂದ ನಮ್ಮನ್ನು ಸಾಯುವಂತೆ ಅವರು ಒತ್ತಾಯಿಸುತ್ತಿದ್ದಾರೆ. ಉತ್ತರಪ್ರದೇಶ ಮತ್ತು ದೇಶದ ಜನರೆಲ್ಲರೂ ಇದನ್ನು ಕೇಳಬೇಕೆಂದು ನಾವು ಬಯಸುತ್ತೇವೆ ಎಂದು ಕೇಳಿದ್ದ.
ಇದಾದ ಬಳಿಕ ಇಬ್ಬರು ಸುಪ್ರೀಂಕೋರ್ಟ್ ಹೊರಭಾಗದ ಗೇಟಿನ ಮುಂದೆ ಸಂತ್ರಸ್ತೆ ಮತ್ತು ಬಾಯ್ಫ್ರೆಂಡ್ ತಮ್ಮನ್ನು ತಾವು ಬೆಂಕಿ ಹಚ್ಚಿಕೊಂಡರು. ಬೆಂಕಿಯನ್ನು ಆರಿಸಿ ತಕ್ಷಣ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಆಗಸ್ಟ್ 18 ರಂದು, ಇಬ್ಬರು ವಾರಣಾಸಿ ಪೊಲೀಸರನ್ನು ಅಮಾನತು ಮಾಡಲಾಯಿತು. ಅಮಾನತುಗೊಂಡ ಅಧಿಕಾರಿಗಳನ್ನು ವಾರಣಾಸಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ರಾಕೇಶ್ ಸಿಂಗ್ ಮತ್ತು ಮಹಿಳೆಯ ವಿರುದ್ಧ ನಕಲಿ ಪ್ರಕರಣದ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿ ಗಿರಿಜಾ ಶಂಕರ್ ಎಂದು ಗುರುತಿಸಲಾಗಿದೆ. (ಏಜೆನ್ಸೀಸ್)
ಮನದ ಬೇಗುದಿ ಹೇಳಲೆಂತು…; ಅಫ್ಘನ್ ವಿದ್ಯಾರ್ಥಿಗಳ ಆತಂಕ, ದುಗುಡ, ದುಮ್ಮಾನ…