ಭೋಪಾಲ: ಮಧ್ಯಪ್ರದೇಶದಲ್ಲಿ ರಾಜಕೀಯ ಅಸ್ಥಿರತೆ ಕಾಡಿದ್ದು, ಆಡಳಿತ ಪಕ್ಷದೊಳಗಿನ ಭಿನ್ನಮತ ತಾರಕಕ್ಕೇರಿದ ಪರಿಣಾಮ ಮುಖ್ಯಮಂತ್ರಿ ಕಮಲನಾಥ್ ಅವರು ಸಚಿವ ಸಂಪುಟದ ಎಲ್ಲ 20 ಸಹೋದ್ಯೋಗಿಗಳ ರಾಜೀನಾಮೆಯನ್ನು ಸೋಮವಾರ ತಡರಾತ್ರಿ ಪಡೆದಿದ್ದಾರೆ. ಇಷ್ಟಾಗ್ಯೂ ಪರಿಸ್ಥಿತಿ ಕೈ ಮೀರುತ್ತಿರುವ ಕಾರಣ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವುದಕ್ಕೆ ದೌಡಾಯಿಸಿದ್ದಾರೆ.
ಕಮಲನಾಥ್ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಗುಣಾದ ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಅವರು ರಾಹುಲ್ ಗಾಂಧಿಗೆ ಆಪ್ತರು ಎಂಬುದು ಪಕ್ಷದಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರ. ಅವರ ಬೆಂಬಲಿಗ ಶಾಸಕರು ಇದೀಗ ಸಂಪರ್ಕಕ್ಕೆ ಸಿಗದ ಕಾರಣ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಸೋಮವಾರ ತಡರಾತ್ರಿ ಸಚಿವ ಸಂಪುಟ ಸಭೆ ನಡೆಸಿದ್ದ ಕಮಲನಾಥ್, 11.30ರ ಹೊತ್ತಿಗೆ ಎಲ್ಲ 20 ಸಚಿವರ ರಾಜೀನಾಮೆ ಪಡೆದುಕೊಂಡಿದ್ದರು. ರಾತ್ರಿ 11.40ರ ಹೊತ್ತಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಜ್ಜನ್ ಸಿಂಗ್ ವರ್ಮಾ, ಜನರಿಂದ ಚುನಾಯಿತವಾದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರತಿಪಕ್ಷದ ಎಲ್ಲ ಪ್ರಯತ್ನಗಳನ್ನೂ ವಿಫಲಗೊಳಿಸಲಾಗುವುದು ಎಂದು ಹೇಳಿದ್ದರು.
ಇದೇ ವೇಳೆ, ರಾಹುಲ್ ಗಾಂಧಿ ಅವರು ದೆಹಲಿಯ ಜನಪಥ್ 10ಕ್ಕೆ ದೌಡಾಯಿಸಿದ್ದು, ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸುತ್ತಿದ್ದಾರೆ. ಸಿಂಧ್ಯಾ ಜತೆಗೆ ರಾಹುಲ್ ಒಡನಾಟ ಚೆನ್ನಾಗಿರುವ ಕಾರಣ ಅವರ ಜತೆಗೆ ಮಾತುಕತೆ ನಡೆಸಲು ರಾಹುಲ್ ಗಾಂಧಿ ಅವರನ್ನೇ ಮುಂದೆ ಬಿಡಲು ಪಕ್ಷ ತೀರ್ಮಾನಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಬಿಜೆಪಿಯ ಹಿರಿಯ ನಾಯಕರನ್ನು ಅಂದರೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಇತರರನ್ನು ಭೇಟಿ ಮಾಡಿದ್ದು, ತಮ್ಮ ಜತೆಗೆ 40 ಶಾಸಕರಿದ್ದಾರೆ ಎಂಬ ವಿಚಾರವನ್ನು ಖಾತರಿಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)