ಭೋಪಾಲ್: ಒಂದೇ ಶ್ವಾನವನ್ನು ಇಬ್ಬರು ವ್ಯಕ್ತಿಗಳು ತನ್ನದೆಂದು ವಾದಿಸುತ್ತಿದ್ದು, ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನಿಜವಾದ ಮಾಲೀಕರು ಯಾರೆಂದು ತಿಳಿಯಲು ನಾಯಿಯ ಡಿಎನ್ಎ ಪರೀಕ್ಷೆ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ.
ಮಧ್ಯಪ್ರದೇಶದ ಹೊಶಾಂಗಾಬಾದ್ನಲ್ಲಿ ಅಪರೂಪದ ಪ್ರಕರಣ ಬೆಳಕಿಗೆ ಬಂದಿದ್ದು, ಶ್ವಾನ ನನ್ನದೆಂದು ವಾದಕ್ಕಿಳಿದಿರುವ ಪತ್ರಕರ್ತ ಮತ್ತು ರಾಜಕೀಯ ವ್ಯಕ್ತಿಯ ಸಮಸ್ಯೆ ಬಗೆಹರಿಸಲು ಪೊಲೀಸರು ಒಲ್ಲದ ಮನಸ್ಸಿನಿಂದ ಮುಂದಾಗಿದ್ದಾರೆ.
ಪ್ರಕರಣ ಬಗ್ಗೆ ಹೊಶಾಂಗಾಬಾದ್ನ ದೆಹತ್ ಪೊಲೀಸ್ ಠಾಣೆಯ ಉಸ್ತುವಾರಿ ಹೇಮಂತ್ ಶ್ರೀವಾತ್ಸವ ಮಾತನಾಡಿದ್ದು, ಮೂರು ತಿಂಗಳ ಹಿಂದೆ ಪತ್ರಕರ್ತ ಶದಾಬ್ ಖಾನ್ ತನ್ನ ಮೂರು ವರ್ಷದ ಕಾಕೋ ನಾಯಿ ನಾಪತ್ತೆಯಾಗಿದೆ ಎಂದು ದೂರು ದಾಖಲಿಸಿದ್ದರು. ನವೆಂಬರ್ 18ರಂದು ಠಾಣೆಗೆ ಬಂದ ಶದಾಬ್ ಶ್ವಾನವೂ ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ನಾಯಕ ಕಾರ್ತಿಕ್ ಶಿವಾರೆ ಮನೆಯಲ್ಲಿದೆ ಎಂದು ಹೇಳಿ ಪೊಲೀಸರ ಜತೆ ತೆರಳಿ ಶ್ವಾನವನ್ನು ತೆಗೆದುಕೊಂಡು ಬಂದಿದ್ದರು. ಆದರೆ, ನ. 19ರಂದು ಶಿವಾರೆ ಪೊಲೀಸ್ ಠಾಣೆಗೆ ತೆರಳಿ ಶ್ವಾನ ತನ್ನದೆಂದು ವಾದಿಸಿ, ನಾಯಿಯ ಹೆಸರು ಟೈಗರ್, ಅದನ್ನು ಕೆಲವು ವಾರಗಳ ಹಿಂದೆ ಇಟಾರ್ಸಿಯಿಂದ ಕೊಂಡು ತಂದಿದ್ದಾಗಿ ತಿಳಿಸಿದರು ಎಂದು ಶ್ರೀವಾತ್ಸವ ಹೇಳಿದ್ದಾರೆ.
ಅಚ್ಚರಿಯ ವಿಚಾರವೆಂದರೆ ಶ್ವಾನವೂ ಕೊಕೋ ಮತ್ತು ಟೈಗರ್ ಹೆಸರಿಗೆ ಚೆನ್ನಾಗಿಯೇ ಪ್ರತಿಕ್ರಿಯಿಸುತ್ತದೆ ಮತ್ತು ಇಬ್ಬರೊಂದಿಗೂ ಸಲುಗೆಯಿಂದ ವರ್ತಿಸುತ್ತದೆ. ಹೀಗಾಗಿ ಶ್ವಾನದ ಮಾಲೀಕ ಯಾರೆಂದು ಪತ್ತೆಹಚ್ಚಲು ಗೊಂದಲವಾಗಿದೆ. ಅದಕ್ಕಾಗಿ ಡಿಎನ್ಎ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ. ಶ್ವಾನದ ಪೋಷಕರು ಪಂಚ್ಮರ್ಹಿಯಲ್ಲಿದ್ದಾರೆ ಎಂದು ಶದಾಬ್ ಹೇಳಿದರೆ, ಇಟಾರ್ಸಿಯಲ್ಲಿದ್ದಾರೆಂದು ಶಿವಾರೆ ತಿಳಿಸಿದ್ದಾರೆ. ಹೀಗಾಗಿ ಪೋಷಕರ ರಕ್ತದ ನಮೂನೆ ತೆಗೆದುಕೊಂಡು ಬರು ಎರಡು ಪೊಲೀಸ್ ತಂಡಗಳನ್ನು ಕಳುಹಿಸಿದ್ದೇವೆ. ಶುಕ್ರವಾರ ರಾತ್ರಿ ಪಶುವೈದ್ಯರ ಸಹಾಯದಿಂದ ಶ್ವಾನ ರಕ್ತದ ಮಾದರಿಯನ್ನು ತೆಗೆದುಕೊಂಡಿದ್ದೇವೆ. ಅಲ್ಲಿಯವರೆಗೆ ಶ್ವಾನ ಶಿವಾರೆ ಬಳಿಯಿರಲಿ ನಿರ್ಧರಿಸಿದ್ದೇವೆ ಎಂದು ಶ್ರೀವಾತ್ಸವ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಾರಿ ವೈರಲ್ ಆಗ್ತಿದೆ ಐಆರ್ಟಿಎಸ್ ಅಧಿಕಾರಿಯ ಲಗ್ನ ಪತ್ರಿಕೆ ಸಂದೇಶ: ನೀವೂ ಫಿದಾ ಆಗೋದು ಗ್ಯಾರೆಂಟಿ!
ಡಿಎನ್ಎ ಪರೀಕ್ಷೆಯು ಸತ್ಯವನ್ನು ಹೊರ ಹಾಕಲಿದೆ ಎಂದು ಶದಾಬ್ ಮತ್ತು ಶಿವಾರೆ ಇಬ್ಬರು ಭರವಸೆ ಹೊಂದಿದ್ದಾರೆ. ಡಿಎನ್ಎ ಪರೀಕ್ಷೆ ಹೊರತು ಪಡಿಸಿ ವ್ಯಾಕ್ಸಿನೇಷನ್ ಕಾರ್ಡ್ ಸೇರಿದಂತೆ ಶ್ವಾನ ನನ್ನದೆಂದು ಸಾಬೀತು ಮಾಡುವ ಎಲ್ಲ ದಾಖಲಾತಿಗಳನ್ನು ಪೊಲೀಸರಿಗೆ ನೀಡಿದ್ದೇನೆಂದು ಶದಾಬ್ ಹೇಳಿದ್ದಾರೆ. ಶದಾಬ್ ನನ್ನ ಅನುಮತಿ ಇಲ್ಲದೆ ಮನೆಯಿಂದ ಶ್ವಾನವನ್ನು ತೆಗೆದುಕೊಂಡು ಹೋಗಿದ್ದಾರೆ. ಡಿಎನ್ಎ ಪರೀಕ್ಷೆ ಸತ್ಯವನ್ನು ತಿಳಿಸಲಿದೆ ಎಂದು ಶಿವಾರೆ ಹೇಳಿದ್ದಾರೆ. (ಏಜೆನ್ಸೀಸ್)
VIDEO| ದಾಖಲೆ ಬರೆಯುವ ಆಸೆಗೆ ಮೂಕ ಪ್ರಾಣಿಗಳಿಗೆ ಶಿಕ್ಷೆ: ಯುವಕರ ಹುಚ್ಚಾಟಕ್ಕೆ ಭಾರಿ ಆಕ್ರೋಶ