ಉಡುಪಿ: ಕೆಲಸ ಮಾಡುವವರಿಗೆ ಭಾಷೆ ಮುಖ್ಯವಲ್ಲ. ಉತ್ತರ ಭಾರತದವರು ಇಲ್ಲಿ ಬಂದು ಕಾರ್ಯನಿರ್ವಹಿಸುತ್ತಾರೆ. ತಮಿಳುನಾಡಿನ ಎಂಪಿಗಳಿಗೆ ಹಿಂದಿ ಬರೋದಿಲ್ಲ. ಕಾಂಗ್ರೆಸ್ಗೆ ಭಾಷೆಯೇ ಮುಖ್ಯವಾದರೆ ಹಿಂದಿ ಪಂಡಿತರಿಗೆ , ಇಂಗ್ಲಿಷ್ ಪ್ರಾಧ್ಯಾಪಕರಿಗೆಲ್ಲ ಟಿಕೆಟ್ ನೀಡಬೇಕಿತ್ತು. ಆದರೆ ಮಂತ್ರಿಗಳ ಮಕ್ಕಳನ್ನು ಎಂಪಿ ಅಭ್ಯರ್ಥಿಗಳನ್ನಾಗಿ ಮಾಡಿದ್ದಾರೆ ಎಂದು ಉಡುಪಿ&ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3ನೇ ತರಗತಿ ಓದಿ ಕಾಂಗ್ರೆಸ್ ಹಿರಿಯ ನಾಯಕ ಕಾಮರಾಜ್ ಅವರು 2 ಪ್ರಧಾನಿಗಳ ನೇಮಕದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರಿಗೆ ತಮಿಳು ಬಿಟ್ಟರೆ ಬೇರೆ ಭಾಷೆ ಬರುತ್ತಿರಲಿಲ್ಲ. ಕೋಟ ಮತ್ತು ಜೆಪಿ ಹೆಗ್ಡೆಯವರ ಬಯೋಡಾಟ ಅಕ್ಕಪಕ್ಕವಿಟ್ಟರೆ ಕೋಟ ಅವರ ಸಾಧನೆಯೇ ಹೆಚ್ಚಿದೆ ಎಂದು ಹೇಳಿದರು.
5 ಲಕ್ಷ ಮತದ ಅಂತರದಿಂದ ಗೆಲುವು
ಸಾಮಾಜಿಕ ನ್ಯಾಯದಡಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದ್ದು, ಬಿಜೆಪಿ ಟಿಕೇಟ್ ಘೋಷಣೆ ಬಳಿಕ ಎಲ್ಲರೂ ಐಕ್ಯಮತದಿಂದ ಕೋಟ ಅವರನ್ನು ಗೆಲ್ಲಿಸುವಲ್ಲಿ ಶ್ರಮ ವಹಿಸುತ್ತಿದ್ದೇವೆ. ಈ ಮೂಲಕ ಪ್ರಧಾನಿ ಮೋದಿಯವರ ಅಬ್ ಕೀ ಬಾರ್ 400 ಪಾರ್ ಘೋಷಣೆಗೆ ಕೊಡುಗೆ ನೀಡಲಾಗುವುದು. ಎಂಪಿಯಾಗಿ (ಮೆಂಬರ್ ಆ್ ಪಂಚಾಯತ್) ರಾಜಕೀಯ ಜೀವನ ಪ್ರಾರಂಭಿಸಿದ ಕೋಟ ಅವರಿಗೆ ಮತ್ತೆ 30 ವರ್ಷದ ಬಳಿಕ ಎಂಪಿಯಾಗುವ ಅವಕಾಶ ಲಭ್ಯವಾಗಿದೆ. 5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ.
ಬಿಜೆಪಿ ಕಾರ್ಯಕರ್ತರು ಜಾತಿ ನೋಡಲ್ಲ
ಬಿಜೆಪಿ ಕಾರ್ಯಕರ್ತರು ಜಾತಿ ನೋಡಿ ಕೆಲಸ ಮಾಡಿದ ಉದಾಹರಣೆಗಳಿಲ್ಲ. ದೇಶದ ಬಗ್ಗೆ, ಹಿಂದುತ್ವದ ಬಗ್ಗೆ, ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಾರೆ. ನನಗೆ ಟಿಕೇಟ್ ನೀಡದ ಬಗ್ಗೆ ಯಾವುದೇ ಬೇಸರವಿಲ್ಲ. ಕ್ರೀಡಾ ಮನೋಭಾವದಿಂದ ಸ್ವೀಕಾರ ಮಾಡುತ್ತೇನೆ. ಪಕ್ಷದ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ. ಕೊನೆಯ ಉಸಿರು ಇರುವರೆಗೂ ಬಿಜೆಪಿಯಲ್ಲಿ ಇರುತ್ತೇನೆ. ನನ್ನ ಯೋಜನೆ ಮತ್ತು ಯೋಚನೆ ಕಾಂಗ್ರೆಸ್ ವಿರುದ್ಧ ಬಿಜೆಪಿಯನ್ನು ಗೆಲ್ಲಿಸುವುದು ಎಂದರು.
ಮಾಧ್ಯಮ ವಿಭಾಗ ಸಂಚಾಲಕ ಶ್ರೀನಿಧಿ ಹೆಗ್ಡೆ, ವಕ್ತಾರ ವಿಜಯಕುಮಾರ್, ಸತೀಶ್ ಶೆಟ್ಟಿ ಮುಟ್ಲುಪಾಡಿ, ನಗರಸಭಾ ಸದಸ್ಯ ಗಿರೀಶ್ ಅಂಚನ್, ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.