ಲಖನೌ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಸಮಾಜವಾದಿ ಪಕ್ಷದ ಸಂಸದ ಮತ್ತು ಇತರ ಇಬ್ಬರ ವಿರುದ್ಧ ತಾಲಿಬಾನ್ಅನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಆರೋಪದ ಮೇಲೆ ‘ದೇಶದ್ರೋಹ’ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಚರ್ಖೇಶ್ ಮಿಶ್ರ ಹೇಳಿದ್ದಾರೆ. ತಾಲಿಬಾನ್ಅನ್ನು ಆತಂಕವಾದಿ ಗುಂಪೆಂದು ಭಾರತ ಸರ್ಕಾರ ಪರಿಗಣಿಸಿರುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಅಫ್ಘಾನಿಸ್ತಾನದ ಸನ್ನಿವೇಶದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಮಾಜವಾದಿ ಪಕ್ಷದ ಸಂಸದ ಶಫೀಖುರ್ ರೆಹಮಾನ್ ಬರ್ಖ್, “ಬ್ರಿಟೀಷರು ಭಾರತವನ್ನಾಳುತ್ತಿದ್ದಾಗ, ನಮ್ಮ ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಡಿತು. ಈಗ ತಾಲಿಬಾನ್ ತಮ್ಮ ದೇಶವನ್ನು ಸ್ವತಂತ್ರಗೊಳಿಸಿಕೊಂಡು, ತಾವೇ ನಡೆಸಲು ಇಚ್ಛಿಸುತ್ತಾರೆ. ತಾಲಿಬಾನ್, ರಷ್ಯ ಮತ್ತು ಅಮೆರಿಕಾದಂತಹ ಬಲಶಾಲಿಗಳನ್ನು ತಮ್ಮ ದೇಶದಲ್ಲಿ ನೆಲೆಸಲು ಬಿಡದಂಥ ಶಕ್ತಿಯಾಗಿದೆ” ಎಂದು ಮಂಗಳವಾರ ಹೇಳಿಕೆ ನೀಡಿದ್ದರು. ಜಿಲ್ಲೆಯ ಇನ್ನಿಬ್ಬರು ವ್ಯಕ್ತಿಗಳು ಫೇಸ್ಬುಕ್ನಲ್ಲಿ ತಾಲಿಬಾನ್ಅನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದರು ಎನ್ನಲಾಗಿದೆ.
I didn't make any such statement (comparing Taliban with Indian freedom fighters). My statement has been misinterpreted. I'm a citizen of India, not of #Afghanistan, so I've no business with what is happening there. I support my govt's policies: SP MP Shafiqur Rahman Barq pic.twitter.com/gF9bqiuoDh
— ANI UP (@ANINewsUP) August 18, 2021
ಆದರೆ ಇಂದು ತಾವು ಆ ರೀತಿ ಹೇಳಿಕೆ ನೀಡಿಲ್ಲ ಎಂದು ಸಂಸದ ಬರ್ಖ್ ಹೇಳಿದ್ದಾರೆ. “ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಭಾರತದ ನಾಗರಿಕ, ಅಫ್ಘಾನಿಸ್ತಾನದ ನಾಗರಿಕನಲ್ಲ… ಆದ್ದರಿಂದ ಅಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನನಗೆ ಯಾವ ಕಾಳಜಿ ಇಲ್ಲ. ನಾನು ನನ್ನ ಸರ್ಕಾರದ ನೀತಿಗಳನ್ನು ಬೆಂಬಲಿಸುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಎಎನ್ಐ ಸಂಸ್ಥೆ ವರದಿ ಮಾಡಿದೆ.
ಮತ್ತೊಂದು ವರದಿಯ ಪ್ರಕಾರ ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಕ್ತಾರ ಮೌಲಾನಾ ಸಜ್ಜದ್ ನೋಮಾನಿ, ತಾಲಿಬಾನ್ಅನ್ನು ಹೊಗಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವುದು ಸಮರ್ಥನೀಯ. ಭಾರತದ ಮುಸ್ಲಿಮರು ತಾಲಿಬಾನ್ಗೆ ಸೆಲ್ಯೂಟ್ ಮಾಡುತ್ತಾರೆ” ಎಂದು ನೋಮಾನಿ ಹೇಳಿದ್ದಾರೆ ಎಂದು ಡಿಎನ್ಎ ವರದಿ ಮಾಡಿದೆ.
ಸಂಸತ್ ಕಲಾಪ ಹಾಳು ಮಾಡಿದ ಕಾಂಗ್ರೆಸ್, ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದೆ: ಸಚಿವ ಗೋವಿಂದ ಕಾರಜೋಳ
ಸೆ.5 ರ ಎನ್ಡಿಎ ಪರೀಕ್ಷೆಗೆ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ: ಸುಪ್ರೀಂ ಕೋರ್ಟ್ ಆದೇಶ